ಬಾಗಲಕೋಟೆ prajakiran.com : ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಯೂ ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಸಂಕಷ್ಟ ಮುಂದುವರೆದಿದೆ.
ಈ ನದಿ ಪಾತ್ರದ ಹಲವು ಹಳ್ಳಿಗಳ ಜನಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಲಿಯ ಜನ ಮಳೆಯಲ್ಲಿ ಸಿಲುಕಿ ನರುಳುತ್ತಿದ್ದಾರೆ.
ಭಾರೀ ಮಳೆಗೆ ನೂರಾರು ಮನೆಗಳು ಜಲಾವೃತಗೊಂಡಿವೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಅವರ ತವರು ಕ್ಷೇತ್ರ ಮುಧೋಳದ ಮಿರ್ಜಿ ಯಲ್ಲಿಯೇ 50 ಮನೆಗಳು ಜಲಾವೃತಗೊಂಡಿವೆ.
ಅದೇ ರೀತಿ ಮಾಚಕನೂರು ಚಿಕ್ಕೂರು ಸೇತುವೆ ಮುಳಗಡೆಯಾಗಿದೆ. ಇದರಿಂದಾಗಿ, ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಜೊತೆಗೆ ಮಾಚಕನೂರಿನ ಹೊಳೆ ಬಸವೇಶ್ವರ ದೇವಸ್ಥಾನ ಮುಳುಗಡೆ ಆಗಿದೆ. ನದಿ ಪಾತ್ರದ ಸಾವಿರಾರು ಎಕರೆ ಬೆಳೆ ನೀರು ಪಾಲು ಆಗಿದ್ದು, ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ನೆರವಿಗೆ ಧಾವಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಬಂದಾಗ ಬರುವ ಇವರು ಶಾಶ್ವತ ಪರಿಹಾರ ಕಲ್ಪಿಸಲು ಏಕೆ ಇಚ್ಛಾಶಕ್ತಿ ತೋರಲ್ಲ ಎಂದು ಕಿಡಿಕಾರಿದ್ದಾರೆ.