ಅಕ್ರಮ ಗಾಂಜಾ ಸಂಗ್ರಹಿಸಿದ್ದ ಆರೋಪ
ಧಾರವಾಡ prajakiran.com : ಅಕ್ರಮವಾಗಿ ಗಾಂಜಾ ಸಂಗ್ರಹ ಆರೋಪದಡಿ ಬಂಧಿಸಲಾಗಿದ್ದ ಅಪರಾಧಿಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಆದೇಶವನ್ನು ಧಾರವಾಡ ಹೈಕೋರ್ಟ್ ಪುರಸ್ಕರಿಸಿ ಮಹತ್ವದ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದ ಸಣ್ಣಲಕ್ಷ್ಮಪ್ಪ ದಳವಾಯಿ ಎಂಬಾತನ ತೋಟದ ಮನೆಯ ಮೇಲೆ ೨೦೦೫ರಲ್ಲಿ ದಾಳಿ ನಡೆಸಿದ್ದ ಪೊಲೀಸರು, ಆತನ ಮನೆಯಲ್ಲಿ ೧೮ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು.
ಅಲ್ಲದೆ, ಈ ಕುರಿತು ದೂರು ದಾಖಲಿಸಿಕೊಂಡು, ತನಿಖೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಅದರ ವಿಚಾರಣೆ ಮಾಡಿದ್ದ ಬೆಳಗಾವಿ ಜಿಲ್ಲಾ ನ್ಯಾಯಾಲಯ, ಅಪರಾಧಿ ಸಣ್ಣಲಕ್ಷ್ಮಪ್ಪ ದಳವಾಯಿಗೆ ೪ ವರ್ಷ ಕಠಿಣ ಶಿಕ್ಷೆ ಮತ್ತು ೨೫ ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿತ್ತು.
ಧಾರವಾಡ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಪರಾಧಿ ದಳವಾಯಿ ಧಾರವಾಡ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ವಿಚಾರಣೆ ನಡೆಸಿದ ನ್ಯಾ. ಉಮಾ ಎಂ.ಜಿ. ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಅಪರಾಧಿ ಸಣ್ಣಲಕ್ಷ್ಮಪ್ಪ ದಳವಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ. ಸರಕಾರದ ಪರವಾಗಿ ವಕೀಲ ವಿನಾಯಕ ಕುಲಕರ್ಣಿ ವಾದ ಮಂಡಿಸಿದ್ದಾರೆ.