*ಫಕೀರ ದಿಂಗಾಲೇಶ್ವರ ಶ್ರೀ ವಿರುದ್ಧ ಪ್ರಕರಣ ದಾಖಲು*
ನವಲಗುಂದ ಪ್ರಜಾಕಿರಣ.ಕಾಮ್ : ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ದ ಬಹಿರಂಗ ಸಮರ ಸಾರಿರುವ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀ ವಿರುದ್ಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್. ಕುಮಾರಸ್ವಾಮಿ ಎಂಬುವರು ಈ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಅವರು ಆರೋಪಿಸಿರುವ ವಿವರ ಹೀಗಿದೆ.
ನವಲಗುಂದ ಗಾಂಧಿ ಮಾರ್ಕೇಟ್ ನಲ್ಲಿ ಮೇ 2ರಂದು ನಡೆದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ದ್ವೇಷದ ಭಾಷಣ ಮಾಡಿದ್ದು, ಇದರಿಂದಾಗಿ ಸಮಾಜದಲ್ಲಿ ವರ್ಗ,ಜಾತಿ,ಪಂಥಗಳ ನಡುವೆ ಸಾಮರಸ್ಯ ಕೆಡಿಸಿ, ಒಡಕು ಉಂಟು ಮಾಡಿದ್ದಾರೆ.
ಇದು ಸಮಾಜದ ಸ್ವಾಸ್ಥ್ಯ ಕೆಡಿಸುವ ಹುನ್ನಾರವಾಗಿದೆ. ಹರಿ ಓಂ ಹೋಗಿ ಜೈ ಶ್ರೀರಾಮ್ ಬಂದಿದೆ. ಹಣೆಯ ಮೇಲೆ ವಿಭೂತಿ ಹೋಗಿ ಕುಂಕುಮ ಬಂದಿದೆ. ಬ್ರಾಹ್ಮಣರನ್ನು ಪ್ರೀತಿಸಿದಷ್ಟು ಲಿಂಗಾಯತರನ್ನು ಗೌರವಿಸುವುದಿಲ್ಲ ಎಂದು ಕಿಡಿಕಾರಿದ್ದರು.
ಅಲ್ಲದೆ, ಈ ಬಾರಿ ಪ್ರಹ್ಲಾದ ಜೋಶಿಯವರನ್ನು ಸೋಲಿಸದಿದ್ದರೆ ಧಾರವಾಡ ಜಿಲ್ಲೆಯ ಲಿಂಗಾಯತರಿಗೆ ಉಳಿಗಾಲವಿಲ್ಲ ಎಂದು ಗುಡುಗಿದ್ದರು.
ಹೀಗಾಗಿ ಫಕೀರ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.