*ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು*
*ಧಾರವಾಡದ ಸುತಗಟ್ಟಿ ಬಳಿ ಆರೋಪಿ ಸದ್ದಾಂ ಹುಸೇನ್ ಸೆರೆ*
*ಬಂಧಿಸಲು ಹೋದ ಇನ್ಸಪೆಕ್ಟರ್, ಪೊಲೀಸ್ ಮೇಲೆ ಪೆನ್ ಚಾಕುವಿನಿಂದ ದಾಳಿ ಮಾಡಿದ ಸದ್ದಾಂ*
ಧಾರವಾಡ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸರು ಅಪ್ರಾಪ್ತೆಯ ಅತ್ಯಾಚಾರ ಆರೋಪಿಯನ್ನು ಬಂಧಿಸಲು ಹೋದಾಗ ಪೆನ್ ಚಾಕುವಿನಂದ ದಾಳಿ ಮಾಡಿದ ಘಟನೆ ಧಾರವಾಡದ ಸುತಗಟ್ಟಿ ಬಳಿ ನಿನ್ನೆ ರಾತ್ರಿ ನಡೆದಿದೆ.
ದಾಳಿಯಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ಪೊಲೀಸ್ ಸಿಬ್ಬಂದಿ ಅರುಣ್ ಗಾಯಗೊಂಡಿದ್ದು, ಇಬ್ಬರು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಹೇಳಿದರು.
ಆರೋಪಿ ತಪ್ಪಿಸಿಕೊಂಡು ಓಡಿ ಹೋಗಬಾರದು ಹಾಗೂ ತಮ್ಮ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡೇಟು ಹಾಕಿದ್ದಾರೆ.
ಹೀಗಾಗಿ ಆರೋಪಿಯನ್ನು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯದ ಪೋಕ್ಸೋ ಕಾಯ್ದೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.
ಅಲ್ಲದೆ,ಹಿಂದೂ ಪರ ಸಂಘಟನೆಗಳು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿದ್ದವು.
ತಕ್ಷಣ ಆತನನ್ನು ಬಂಧಿಸಬೇಕು. ಆತ ಬಾಲಕಿ ಹಾಗೂ ಅವರ ಪೋಷಕರ ಕೊಲೆ ಮಾಡುವ ಬೆದರಿಕೆ ಒಡ್ಡಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದರು.
ಇದೀಗ ಆರೋಪಿ ಸದ್ದಾಂ ಹುಸೇನ್ ಸದ್ದು ಅಡಗಿಸಲು ಪೊಲೀಸರು ಕಾಲಿಗೆ ಗುಂಡೇಟು ಹಾಕಿರುವುದು ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.