ಧಾರವಾಡ prajakiran.com : ಧಾರವಾಡದ ಕುಮಾರೇಶ್ವರ ನಗರದ ಬಹು ಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿನ ೫ ನೇ ಮತ್ತು ೬ನೇ ಆರೋಪಿಗಳ ವಿರುದ್ಧದ ವಿಚಾರಣೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
೨೦೧೯ರ ಮಾ. ೧೯ರಂದು ಬಹುಮಹಡಿ ಕಟ್ಟಡ ಕುಸಿದಿತ್ತು. ಕಟ್ಟಡ ಮಾಲೀಕರು ಸೇರಿ ಒಟ್ಟು ೯ ಜನರ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮಾಡಿರುವ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಹೀಗಾಗಿ ಆರೋಪ ಪಟ್ಟಿಯಲ್ಲಿನ ೫ನೇ ಆರೋಪಿ ಇಂಜಿನಿಯರ್ ಡಿ.ಎಲ್. ಕುಲಕರ್ಣಿ ಹಾಗೂ ೬ನೇ ಆರೋಪಿ ವಿವೇಕ ಪವಾರ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರದ್ದುಪಡಿಸುವಂತೆ ಕೋರಿದ್ದರು.
ವಿಚಾರಣೆ ಮಾಡಿದ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ೫ ಮತ್ತು ೬ನೇ ಆರೋಪಿಗಳ ವಿರುದ್ಧದ ವಿಚಾರಣೆಗೆ ಮಾತ್ರ ಮುಂದಿನ ವಿಚಾರಣೆವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆ ಮುಂದೂಡಿದೆ.