ಧಾರವಾಡ prajakiran.com :
ಧಾರವಾಡದಲ್ಲಿ ಅಂಗಡಿ ಬಂದ್ ಮಾಡಿ ಎಂದ ಹೆಡ್ ಕಾನ್ಸಟೇಬಲ್ ಮೇಲೆಯೇ ರೌಡಿಶೀಟರ್ ಒಬ್ಬ ಹಲ್ಲೆ ಮಾಡಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಧಾರವಾಡದ ತೇಜಸ್ವಿನಗರದಲ್ಲಿರುವ ಹಾರ್ಡ್ ವೇರ್ ಅಂಗಡಿ ಬಂದ್ ಮಾಡಲು ಹೆಡ್ ಕಾನ್ಸಟೇಬಲ್ ಅಲ್ತಾಫ್ ಹುಯಿಲಗೋಳ ಮನವಿ ಮಾಡಿದರು.
ಆದರೆ ಇದರಿಂದ ರೊಚ್ಚಗೆದ್ದ ರೌಡಿಶೀಟರ್ ಅನಿಲ ಡಾಂಗೆ ಹಾಗೂ ಆತನ ಮಗ ಸಾಹಿಲ್ ಡಾಂಗೆ ಪೊಲೀಸ್ ಎಂಬುದು ಮರೆತು ಕರ್ತವ್ಯಕ್ಜೆ ಅಡ್ಡಿ ಪಡಿಸಿ ಖಾಕಿಯನ್ನೇ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ್ದಾರೆ.
ಈ ರೌಡಿಶೀಟರ್ ಅನಿಲ ಡಾಂಗೆ ಹಿಂದೆ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಟ್ಕಾ ಚೀಟಿ ಬರೆಯುವ ವೇಳೆ ಹಲವು ಬಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.
ಈಗ ರಿಯಲ್ ಎಸ್ಟೇಟ್ ಹಾಗೂ ಮೀಟರ್ ಬಡ್ಡಿ ದಂಧೆಗೆ ಇಳಿದು ಸ್ವಲ್ಪ ಹಣ ಮಾಡಿದ ಮೇಲೆ ಪೊಲೀಸರ ಮೇಲೆಯೇ ಮುಗಿಬಿಳುವಷ್ಟು ದೊಡ್ಡವನಾಗಿದ್ದಾನೆ ಎಂದು ವಿದ್ಯಾಗಿರಿ ಪೊಲೀಸರು ನೋವು ತೋಡಿಕೊಂಡಿದ್ದಾರೆ.
ಇದರಿಂದಾಗಿ ಮನನೊಂದ ಹೆಡ್ ಕಾನ್ಸಟೇಬಲ್ ಅಲ್ತಾಫ್ ಹುಯಿಲಗೋಳ ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಈ ಕುರಿತು ಹುಬ್ಬಳ್ಳಿ ಧಾರವಾಡ ಅವಳಿನಗರ ಪೊಲೀಸ್ ಆಯುಕ್ತ ಲಾಬುರಾಮ್ ಅವರು ರೌಡಿಶೀಟರ್ ಅನಿಲ ಡಾಂಗೆ ಹಾಗೂ ಆತನಮಗ ಸಾಹಿಲ್ ಡಾಂಗೆ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸಬೇಕು.
ಕರೋನಾ ಸಂಕಷ್ಟದ ಸಮಯದಲ್ಲಿ ಜೀವ ಒತ್ತೆ ಇಟ್ಟು ಕೆಲಸ ಮಾಡುವ ಪೊಲೀಸರ ಮೇಲೆಯೇ ಪುಡಿರೌಡಿಯೊಬ್ಬ ದರ್ಪ ಮೆರೆಯುವಷ್ಟು ಪೊಲೀಸರು ಮೆತ್ತಗಾದರೆ ಎಂಬ ಪ್ರಶ್ನೆ ಜನಸಾಮಾನ್ಯರಿಗೆ ಎದುರಾಗಿದೆ.
ಇದಕ್ಕೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಅಧಿಕಾರಿ ವರ್ಗದವರು ಯಾವ ರೀತಿಯ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕು.