ಬ್ರೌನ್ ಶುಗರ್ ಮಾರಾಟ ಪ್ರಕರಣ :
ಧಾರವಾಡ prajakiran.com : ಮಾದಕ ವಸ್ತುಗಳನ್ನು (ಬ್ರೌನ್ ಶುಗರ್) ಮಾರಾಟ ಮಾಡುತ್ತಿದ್ದ ಅಪರಾಧಿಗೆ ಧಾರವಾಡ ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಅಲ್ಲದೆ, ಆರೋಪಿಯ ಮೇಲ್ಮನವಿಯನ್ನು ಧಾರವಾಡ ಹೈಕೋರ್ಟ್ ಪೀಠ, ವಜಾಗೊಳಿಸಿ, ಮಹತ್ವದ ಆದೇಶ ಹೊರಡಿಸಿದೆ.
ಧಾರವಾಡದ ಮೈಲಾರಲಿಂಗ ನಗರದ ಮನೆಯೊಂದರ ಮೇಲೆ ೨೦೧೩ರ ಜ. ೩೧ರಂದು ದಾಳಿ ನಡೆಸಿದ್ದ ಶಹರ ಠಾಣೆ ಪೊಲೀಸರು, ಆರ್ಥರ್ ಜೋಸೆಫ್ ಎಂಬ ನೈಜೀರಿಯನ್ ಪ್ರಜೆಯೊಬ್ಬನಿಂದ ೨೨೦ ಗ್ರಾಂ. ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದರು.
ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಅದರ ವಿಚಾರಣೆ ಮಾಡಿದ್ದ ಜಿಲ್ಲಾ ನ್ಯಾಯಾಲಯ, ಅಪರಾಧಿ ಆರ್ಥರ್ ಜೋಸೆಫ್ಗೆ ೧೦ ವರ್ಷ ಕಠಿಣ ಶಿಕ್ಷೆ ಮತ್ತು ೧ ಲಕ್ಷ ದಂಡ ವಿಧಿಸಿ ೨೦೧೬ರಲ್ಲಿ
ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಜೋಸೆಫ್ ಹೈಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ಅದರಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಉಮಾ ಎಂ.ಜಿ. ಅವರಿದ್ದ ಏಕಸದಸ್ಯ ಪೀಠ, ಜಿಲ್ಲಾ ನ್ಯಾಯಾಲಯ ಮಾಡಿದ ಆದೇಶ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಅಪರಾಧಿ ಜೋಸೆಫ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಸರ್ಕಾರದ ಪರವಾಗಿ ವಕೀಲ ವಿನಾಯಕ ಕುಲಕರ್ಣಿ ವಾದ ಮಂಡಿಸಿದ್ದಾರೆ.