ಧಾರವಾಡ prajakiran.com : ಹುಬ್ಭಳ್ಳಿ-ಧಾರವಾಡದ ಕೋರೋನಾ ಫ್ರೆಂಟ್ ಲೈನ್ ವಾರಿಯರ್ಸ್ ಗಳಾದ ಪೊಲೀಸರಿಗೂ ಕೋರೋನಾ ಕರಿ ಛಾಯೆ ಬಿದ್ದಿದ್ದು, ಮತ್ತೆ ಅದನ್ನ ಜಯಿಸಿ ಮರಳಿ ಕರ್ತವ್ಯಕ್ಕೆ ಬಂದವರಿಗೆ ಸನ್ಮಾನ ಮಾಡಲಾಗುತ್ತಿದೆ.
ಅದರಲ್ಲೂ ಧಾರವಾಡದ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಕೂಡಾ ಒಬ್ಬರು. ಕರ್ತವ್ಯದ ಮಧ್ಯದಲ್ಲೇ ಕರೊನಾ ಸೋಂಕು ತಗುಲಿದ್ದ ಮುಲ್ಲಾ ಬೇಗಂ ಸದ್ಯ ಗುಣಮುಖರಾಗಿ ಸೇವೆಗೆ ಹಾಜರಾಗಿದ್ದಾರೆ.
ಹೀಗಾಗಿ ಅವರಿಗೆ ಧಾರವಾಡದ ಎಸಿಪಿ ಅನುಷಾಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಧಾರವಾಡ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಈ ಅಪರೂಪದ ಘಟನೆಗೆ ಸಾಕ್ಷಿಯಾದರು.
ಈ ವೇಳೆ ಮಾತನಾಡಿದ ಧಾರವಾಡದ ಎಸಿಪಿ ಅನುಷಾ, ಪೊಲೀಸರು ಸಾರ್ವಜನಿಕರ ಸಂಪರ್ಕಕ್ಕೆ ಬರುವುದು ಸಹಜ.
ಅದಕ್ಕೆ ಹೆದರುವ ಅಗತ್ಯವಿಲ್ಲ. ಕೈ ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳಿ, ಹೊರಗಡೆಯಿಂದ ಬಂದ ತಕ್ಷಣ ಪಂಚೇಂದ್ರ ಮುಟ್ಟಿಕೊಳ್ಳಬೇಡಿ.
ನಮ್ಮ ಹೆಡ್ ಕಾನ್ಸಟೇಬಲ್ ಮುಲ್ಲಾ ಬೇಗಂ ಹೇಗೆ ಗುಣಮುಖವಾಗಿ ಕರ್ತವ್ಯಕ್ಕೆ ಮರಳಿದ್ದಾರೋ ಹಾಗೆಯೇ ಎಲ್ಲರು ಬರಲಿದ್ದಾರೆ ಎಂದು ಪೊಲೀಸರಿಗೆ ಆತ್ಮವಿಶ್ವಾಸ ತುಂಬಿದರು.
ಧಾರವಾಡ ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ ಹತ್ತಾರು ಕರೋನಾ ಸೇನಾನಿಗಳು ಬಳಲಿ ಬೆಂಡಾಗಿ ಆನಂತರ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಆದರೂ ಚಿಕಿತ್ಸೆ ಫಲಿಸದೆ ಇಬ್ಬರು ಎ ಎಸ್ ಐಗಳು ಸಾವನ್ನಪ್ಪಿದ್ದಾರೆ. ಹೀಗಾಗಿ ಯಾರೊಬ್ಬರು ಪೊಲೀಸರು ಎದೆಗುಂದಬಾರದು.
ಜೊತೆಗೆ ಅದನ್ನು ಲೆಕ್ಕಿಸದೆ ಭಾನುವಾರದ ಲಾಕ್ ಡೌನ್ ಯಶಸ್ವಿಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಹಾಗೂ ಧಾರವಾಡ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅವರಿಗೆ ನಮ್ಮದೊಂದು ನಮನ.