ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಒಬ್ಬರು ನಿನ್ನೇ ಎದೆನೋವಿನಿಂದ ಬಳಲುತ್ತಿದ್ದರು. ಅವರನ್ನು ತಕ್ಷಣ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಅವರು ಭಾನುವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತರನ್ನು ಕಮರಿಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಹನುಮಾನ್ ಸಿಂಗ್ ಜಮಾದಾರ್ ಎಂದು ಗುರುತಿಸಲಾಗಿದೆ.
ಅವರು ಕಳೆದ ಹಲವು ದಿನಗಳಿಂದ ಕರೋನಾ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಹೀಗಾಗಿ ಅವರ ಪ್ರಾರ್ಥಿವ ಶರೀರವನ್ನು ಮರಣೋತ್ತರ ಕರೋನಾ ತಪಾಸಣೆಗೆ ಒಳಪಡಿಸಲಾಗಿದೆ.
ಆದರೆ ಈವರೆಗೆ ವರದಿ ನೆಗೆಟಿವ್ ಅಥವಾ ಪಾಸಿಟಿವ್ ಎಂಬುದು ಗೊತ್ತಾಗಿಲ್ಲ. ಆದರೂ ಬಹುತೇಕ ಕೋವಿಡ್ ಸೋಂಕಿಗೆ ಅವರು ಬಲಿಯಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಆಸ್ಪತ್ರೆ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದ್ದಾರೆ. .
ಈ ಹಿನ್ನಲೆಯಲ್ಲಿ ಅವರ ಅಂತ್ಯಕ್ರಿಯೆನ್ನು ಕೋವಿಡ್ ನಿಯಮಾನುಸಾರ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಒಂದು ವೇಳೆ ನೆಗೆಟಿವ್ ಬಂದರೆ ಒಳ್ಳೆಯದು. ಆದರೆ ಪಾಸಿಟಿವ್ ಬಂದರೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಕೂಡ ಕ್ವಾರಂಟಿನ್ ಆಗಬೇಕಾಗುತ್ತದೆ. ಹೀಗಾಗಿ ಅವರ ಕುಟುಂಬ ವರ್ಗ ಸಂಕಷ್ಟಕ್ಕೆ ಸಿಲುಕಿದೆ.
ಈಗಾಗಲೇ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಇಬ್ಬರು ಎ ಎಸ್ ಐಗಳನ್ನು ಬಲಿ ಪಡೆದಿರುವ ಕಿಲ್ಲರ್ ಕರೋನಾ ಮತ್ತೊಬ್ಬ ಹೆಡ್ ಕಾನ್ಸಟೇಬಲ್ ಅವರನ್ನು ಬಲಿ ಪಡೆಯಿತಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಇದರಿಂದಾಗಿ ಧಾರವಾಡ ಜಿಲ್ಲೆಯ ಪೊಲೀಸ್ ಇಲಾಖೆ ಹಾಗೂ ಕರೋನಾ ನಿಯಂತ್ರಣ ಮಾಡಲು ಹಗಲಿರುವ ಶ್ರಮಿಸುತ್ತಿರುವ ಕರೋನಾ ಸೇನಾನಿಗಳನ್ನು ಮತ್ತಷ್ಟು ಎದೆಗುಂದುವಂತೆ ಮಾಡಿದೆ.
ಆದರೂ ಅದನ್ನು ಲೆಕ್ಕಿಸದೆ ಭಾನುವಾರದ ಲಾಕ್ ಡೌನ್ ಯಶಸ್ವಿಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಹಾಗೂ ಧಾರವಾಡ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅವರಿಗೆ ನಮ್ಮದೊಂದು ನಮನ.