ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಏಳು ಖಾಸಗಿ ಆಸ್ಪತ್ರೆಗಳ ವೈದ್ಯರು ಸೇರಿ ಜಿಲ್ಲಾ ನ್ಯಾಯಾಲಯದ ಎದುರಿನ ಇರಕಲ್ ಕಟ್ಟಡದ ಶ್ರೇಯಾ ಆಸ್ಪತ್ರೆಯ ಒಂದು ಭಾಗದಲ್ಲಿ ಯುನಿಟಿ ಹಾಸ್ಪಿಟಲ್ ಹೆಸರಿನಲ್ಲಿ
ಪ್ರತ್ಯೇಕವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲಡಲು 65 ಹಾಸಿಗೆಗಳ ಆಸ್ಪತ್ರೆ ಒದಗಿಸಲು ಮುಂದೆ ಬಂದಿದ್ದಾರೆ.
ಶ್ರೇಯಾ ಆಸ್ಪತ್ರೆಯ ಡಾ. ಸತೀಶ ಇರಕಲ್, ಶ್ರವ್ಯ ಆಸ್ಪತ್ರೆಯ ಡಾ. ಎಸ್.ಆರ್.ಜಂಬಗಿ, ರಾಮನಗೌಡರ ಆಸ್ಪತ್ರೆಯ ಡಾ. ಪ್ರಕಾಶ ರಾಮನಗೌಡರ, ಅಮರಜ್ಯೋತಿ ಆಸ್ಪತ್ರೆಯ ಡಾ. ಜ್ಯೋತಿಪ್ರಕಾಶ ಸುಲ್ತಾನಪುರಿ,
ಅಮೃತ ನರ್ಸಿಂಗ್ ಹೋಂ ನ ಡಾ.ಅಮೃತ ಮಹಾಬಲಶೆಟ್ಟಿ, ಗಲಗಲಿ ನರ್ಸಿಂಗ್ ಹೋಂ ನ ಡಾ. ಅಮಿತ್ ಗಲಗಲಿ, ಮಂಗಳಾ ಹೆರಿಗೆ ಆಸ್ಪತ್ರೆಯ ಡಾ.ಶಿಶಿರ್ ದೇವರಾಜು ಅವರನ್ನೊಳಗೊಂಡ ತಂಡವು ಜಂಟಿಯಾಗಿ ಯುನಿಟಿ ಆಸ್ಪತ್ರೆ ಸ್ಥಾಪಿಸಿ ಅದನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ನಿರ್ಧರಿಸಿದ್ದಾರೆ.
ಉಳಿದ ತಮ್ಮ ಆಸ್ಪತ್ರೆಗಳನ್ನು ನಾನ್ ಕೋವಿಡ್ ಚಿಕಿತ್ಸೆಗೆ ಬಳಸುವುದಾಗಿ ಅವರು ಧಾರವಾಡ ಜಿಲ್ಲಾಡಳಿತಕ್ಕೆ ಲಿಖಿತ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ಖಾಸಗಿ ಆಸ್ಪತ್ರೆ ವೈದ್ಯರು ಈ ಕುರಿತು ಮಾಹಿತಿ ನೀಡಿ ವಿವರಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಧಾರವಾಡದ ಎಳು ಖಾಸಗಿ ಆಸ್ಪತ್ರೆಗಳ ವೈದ್ಯರ ಈ ಕ್ರಮವನ್ನು ಸ್ವಾಗತಿಸಿದರು.
ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಪ್ರಾರಂಭಿಸಲಾಗುತ್ತಿರುವ ಯುನಿಟಿ ಹಾಸ್ಪಿಟಲ್ ಗೆ ಅಗತ್ಯವಿರುವ ಕೆಪಿಎಂಇ ನೋಂದಣಿ, ಟ್ರೇಡ್ ಲೈಸೆನ್ಸ್, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಕ್ಷೇಪಣಾ ಪತ್ರ ಒದಗಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಮಾತನಾಡಿ, ಹೊಸ ಆಸ್ಪತ್ರೆಗೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಕ್ರಮಗಳನ್ನು ವಿವರಿಸಿದರು. ಈ ನಿಟ್ಟಿನಲ್ಲಿ ತ್ವರಿತ ಸ್ಪಂದನೆಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ( SAST) ಅಡಿ ಯುನಿಟಿ ಆಸ್ಪತ್ರೆ ನೋಂದಣಿಯಾದರೆ, ಕೋವಿಡ್ ಸೋಂಕಿತರಿಗೆ ಸರ್ಕಾರ ನಿರ್ಧರಿಸಿದ ದರದಲ್ಲಿ ಚಿಕಿತ್ಸೆ ಒದಗಿಸಲು ಸಿದ್ಧವಿದ್ದೇವೆ.
ವೈದ್ಯರು,ನರ್ಸ್ ಹಾಗೂ ಸಹಾಯಕ ಸಿಬ್ಬಂದಿಗೆ ವಿಮಾ ಸೌಲಭ್ಯ ನೀಡಬೇಕು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಮಾಸಿಕವಾಗಿ ವೈದ್ಯಕೀಯ ಶುಲ್ಕ ಪಾವತಿಯಾಗುವಂತೆ ಕ್ರಮ ವಹಿಸಬೇಕು ಎಂದು ಖಾಸಗಿ ವೈದ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.