ಧಾರವಾಡ prajakiran.com : ಕರೋನಾ ವಿಷಯವಾಗಿ ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಯಡವಟ್ಟಿನ ಮೇಲೆ ಯಡವಟ್ಟುಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕರೋನಾ ಸೋಂಕಿತರನ್ನು 10 ದಿನಗಳ ಕಾಲ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ಕೊಡದೆ ಎರಡೂ ಮೂರು ದಿನಗಳಲ್ಲಿ ಸಾಗ ಹಾಕಲಾಗುತ್ತಿದೆ ಎಂದು ಜೆಡಿಎಸ್ ರೈತ ಘಟಕದ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಆರೋಪಿಸಿದ್ದಾರೆ.
ಧಾರವಾಡ ತಾಲೂಕಿನ ಹಲವು ಹಳ್ಳಿಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಿಂದಾಗಿ ಸೋಂಕಿತರು ಮನೆಗೆ ಮರಳಿದ ನಂತರ ಗ್ರಾಮದಲ್ಲಿ ಓಡಾಡಿದರೆ ಯಾರು ಹೊಣೆ ?
ಅವರಿಂದ ಗ್ರಾಮಸ್ಥರಿಗೆ ಹಾಗೂ ಅಕ್ಕಪಕ್ಕದವರಿಗೆ ವ್ಯಾಪಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಗ್ರಾಮಸ್ಥರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಆರಂಭದಿಂದಲೂ ಬಡಜನರ ಜೊತೆಗೆ ಚೆಲ್ಲಾಟವಾಡುತ್ತಿದೆ.
ಜಿಲ್ಲಾಡಳಿತ ಕರೋನಾ ನಿಯಂತ್ರಣ ಮಾಡುವಲ್ಲಿ ಹಾಗೂ ಅದರ ಜವಾಬ್ದಾರಿಯುತ ನಿರ್ವಹಣೆ ಮಾಡುವಲ್ಲಿ ಕೂಡ ಸಂಪೂರ್ಣ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಕೋವಿಡ್ ಸೋಂಕಿತರನ್ನು ಕೇವಲ ಎರಡೇ ದಿನಕ್ಕೆ ಮನೆಗೆ ಕಳುಹಿಸುತ್ತಿರುವದು ಸರಿ ಅಲ್ಲ. ಹಳ್ಳಿಗಳಲ್ಲಿ ಕೊವಿಡ್_19 ರೋಗಿಗಳಿಗೆ ಹೋಂ ಕೊರಂಟೈನ್ ಮಾಡಲು ಸಾಧ್ಯವಿಲ್ಲ.
ಅವರಿಗೆ ಕೇಂದ್ರ ಹಾಗೂ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಎಲ್ಲ ಸೌಲಭ್ಯಗಳು ಸಿಗಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳಿಗೆ ಅರಿವು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವ ಸಂದರ್ಭದಲ್ಲಿ ಸೋಂಕಿತರು ಎರಡು ಮೂರು ದಿನಕ್ಕೆ ಮನೆಗೆ ಬಂದರೆ ಇನ್ನುಳಿದವರ ಗತಿಯೇನು.
ಆರೋಗ್ಯ ಇಲಾಖೆಯವರು ಯಾವ ಪ್ರೋಟೊ ಕಾಲ್ ಪ್ರಕಾರ ಕೆಲಸಾ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರೋನಾ ಸೋಂಕಿತರಿಗೆ ಏನು ಹೇಳದೆ ಡಿಸ್ಚಾರ್ಜ್ ಮಾಡುತ್ತಿರುವುದು ಸರಿಯೇ. ಜಿಲ್ಲಾಡಳಿತ ಏನು ಮಾಡುತ್ತಿದೆ. ಹೀಗಾದರೆ ಹಳ್ಳಿಗಳು ಬರುವ ದಿನಗಳಲ್ಲಿ ಕೊವಿಡ್ ಹಳ್ಳಿಗಳಾಗುತ್ತವೆ.
ಏಚ್ಚರ ವಹಿಸಿದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಗಂಗಾಧರ ಪಾಟೀಲ ಕುಲಕರ್ಣಿ ಎಚ್ಚರಿಸಿದ್ದಾರೆ.