ಅಕ್ಟೋಬರ್ 9 ನಾಮಪತ್ರಗಳ ಪರಿಶೀಲನೆ
ಧಾರವಾಡ prajakiran.com : ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅಕ್ಟೋಬರ್ 28 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಅ. 8ರಂದು 13 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 19 ಅಭ್ಯರ್ಥಿಗಳಿಂದ 32 ನಾಮಪತ್ರಗಳು ಸಲ್ಲಿಕೆಯಾಗಿವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಎಂ. ಕುಬೇರಪ್ಪ , ಭಾರತೀಯ ಜನತಾ ಪಕ್ಷದ ಎಸ್.ವ್ಹಿ. ಸಂಕನೂರ, ಜೆಡಿಎಸ್ ನ ಶಿವಶಂಕರ ಕಲ್ಲೂರ ಇಂದು ಮತ್ತೊಂದು ಪ್ರತಿಗಳಲ್ಲಿ ನಾಮಪತ್ರಗಳನ್ನು ಸಲ್ಲಿಸಿದರು.
ಶಿವಸೇನೆ ಅಭ್ಯರ್ಥಿಯಾಗಿ ಸೋಮಶೇಖರಪ್ಪ ಉಮರಾಣಿ, ಸ್ವತಂತ್ರ ಅಭ್ಯರ್ಥಿಗಳಾಗಿ ಮಹ್ಮದ್ ಶಫೀವುದ್ದೀನ್,ಬಿ.ಡಿ.ಹಿರೇಗೌಡ್ರ, ದಶರಥರಾಜ ರಂಗಾರೆಡ್ಡಿ,ಶಿವರಾಜ ಕಾಂಬಳೆ,ಮಲ್ಲಿಕಾರ್ಜುನ ಚನ್ನಪ್ಪ, ಮಂಜುನಾಥ ಬೆಳವಟ್ಟಿ,ಕೃಷ್ಣ ಹನುಮಂತಪ್ಪ, ಅಶೋಕ ಜವಳಿ ಹಾಗೂ ಬೊಮ್ಮನಪಾದ ಅವರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಚುನಾವಣಾಧಿಕಾರಿಗಳಾಗಿರುವ ,ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿರುವ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಅವರು ಸ್ವೀಕರಿಸಿದರು.
ಅಕ್ಟೋಬರ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ. 12 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.