ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕೋವಿಡ್-೧೯ ರಿಂದ ಬಾಧಿತರಾದವರ ಚಿಕಿತ್ಸೆಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳ ಖರೀದಿ ಹೆಸರಿನಲ್ಲಿ ನಡೆಸಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹಾಗೂ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಅವರು ಶುಕ್ರವಾರ ಧಾರವಾಡದಅಪರ್ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದರು.
ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ ಕಿಟ್ ಹಾಗೂ ಇನ್ನಿತರ ಸಲಕರಣೆಗಳನ್ನು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಖರೀದಿಸಲಾಗಿದೆ.
ಕಡಿಮೆ ದರದಲ್ಲಿ ಸಲಕರಣೆಗಳನ್ನು ಪೂರೈಸುವ ಏಜೆನ್ಸಿಗಳು ಇದ್ದಾಗಲೂ ಹೆಚ್ಚು ದರಪಟ್ಟಿ ನೀಡಿದ ಬಿಜೆಪಿ ಮುಖಂಡರ ಏಜೆನ್ಸಿಗಳಿಗೆ ಆದ್ಯತೆ ಕೊಟ್ಟು, ಬಿಲ್ ಕೂಡ ಪಾವತಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ದೂರಿದರು.
ಜೊತೆಗೆ ಇಲ್ಲಿ ಸರಕಾರದ ಮತ್ತು ಐಸಿಎಂಆರ್ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಖರೀದಿಸಲಾಗಿದೆ. ಈ ಖರೀದಿ ವ್ಯವಹಾರದಲ್ಲಿ ಯಾವುದೇ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ದೂರಿದರು.
ಸಲಕರಣೆಗಳ ಖರೀದಿಯಲ್ಲಿನ ಗೋಲ್ಮಾಲ್ ಕುರಿತು ಈ ಹಿಂದೆಯೇ ನಾವು ಸಂಶಯ ವ್ಯಕ್ತಪಡಿಸಿದ್ದೇವು. ಈ ವಿಷಯ ಇತ್ತೀಚೆಗೆ ಮಾಧ್ಯಮದಲ್ಲಿ ಕೂಡ ವರದಿಯಾಗಿದೆ.
ಹಿಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ರ ಅವಧಿಯಲ್ಲಿ ಈ ಅವ್ಯವಹಾರ ನಡೆದಿರುವ ಸಂಶಯವಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ವ್ಯಯಿಸಿ, ಖೋಟ್ಟಿ ದಾಖಲೆಗಳ ಲೆಕ್ಕ ತೋರಿಸಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ.
ಅಧಿಕ ಮೊತ್ತ ಪಾವತಿಸಿದ ಈ ಖರೀದಿಯಲ್ಲಿನ ವ್ಯವಹಾರವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಆ ಮುಖಾಂತರ ಧಾರವಾಡ ಜಿಲ್ಲೆಯಲ್ಲಿನ ಖರೀದಿ ಗೋಲ್ ಮಾಲ್ ಕುರಿತ ಸತ್ಯ ಸಂಗತಿ ಜನತೆಗೆ ತಿಳಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಆಗ್ರಹಿಸಿದರು.
ಈಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭೋವಿ, ಎಸ್.ಎ.ಪವಾರ, ವಿಲ್ಸನ್ ಫರ್ನಾಂಡಿಸ್, ಬಸವರಾಜ ಪೂಜಾರ, ಅಕ್ಷಯ ಪಾಟೀಲ, ರವಿ ಗೌಳೆ ಇದ್ದರು.