ಧಾರವಾಡ prajakiran.com : ಕೇಂದ್ರ ಸರಕಾರದ ಜನ ವಿರೋಧಿ ಆರ್ಥಿಕ ನೀತಿಯಿಂದ ದೇಶದ ಸಂಪತ್ತು, ಮಿತ್ತಲ್, ಅದಾನಿ, ಅಂಬಾನಿ ಅಂತಹ ಕೆಲವೇ ಜನರ ಬಳಿ ಸಂಗ್ರಹವಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು.
ಅವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಸುಗ್ರೀವಾಜ್ಞೆ ಮೂಲಕ ಬ್ಯಾಂಕುಗಳು ರಾಷ್ಟ್ರೀಕರಣಗೊಳಿಸಿ ೫೦ ವರ್ಷಗಳನ್ನು ಪೂರೈಸಿದೆ.
ಅಂದು ದೇಶದ ಕೃಷಿ,ಸಣ್ಣ ಉದ್ದಿಮೆದಾರರನ್ನು ಮತ್ತು ಜನರನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಲು ಕೆಲವೇ ಬಂಡವಾಳ ಶಾಹಿಗಳ, ಪ್ರಬಲ ಸಮದಾಯದ ಶಕ್ತಿಗಳನ್ನು ವಿರೋಧ ಕಟ್ಟಿಕೊಂಡು ೧೪ ಬ್ಯಾಂಕುಗಳ ರಾಷ್ಟ್ರೀಕರಣದಂತಹ ದಿಟ್ಟ ನಿಲುವು ತಳೆದರು.
ಇದರಿಂದ ದೇಶದ ಆರ್ಥಿಕ ನೆರವು ಎಲ್ಲ ವರ್ಗದ ಜನರನ್ನು ತಲುಪಲು ಸಾಧ್ಯವಾಯಿತು. ಮತ್ತು ಬ್ಯಾಂಕುಗಳು ಸರಕಾರದ ನಿಯಂತ್ರಣಕ್ಕೆ ಒಳಪಟ್ಟವು. ಪರಿಣಾಮ ಸಂವಿಧಾನದ ಅಶೋತ್ತರವಾದ ದಲಿತ, ಹಿಂದುಳಿದ, ಬುಡಕಟ್ಟು ವಿದ್ಯಾವಂತ ಜನರೂ ಬ್ಯಾಂಕುಗಳಲ್ಲಿ ಸೇವೆ ಮಾಡುವ ಅವಕಾಶವನ್ನು ಒದಗಿಸಿಕೊಟ್ಟ ಕೀರ್ತಿ ಇಂದಿರಾಗಾಂಧಿಯವರದ್ದು ಎಂದು ಸ್ಮರಿಸಿದರು.
ಅಂದು ಇಂದಿರಾಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರೆ ಇಂದು ಕೇಂದ್ರದಲ್ಲಿನ ನಾಗಪುರ ನಿಯಂತ್ರಿತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ಬ್ಯಾಂಕುಗಳನ್ನೆಲ್ಲ ಖಾಸಗೀಕರಣ ಮಾಡಿ ಹಳ್ಳಕ್ಕೆ ತಳ್ಳಲು ಹೊರಟಿದೆ ಎಂದು ಆರೋಪಿಸಿದರು.
ಸಂವಿಧಾನ ವಿರೋಧಿ, ಬಹುಜನರ ವಿರೋಧಿ ನೀತಿಯ ಕೇಂದ್ರವು ದೇಶದ ಅತ್ಯಂತ ದೊಡ್ಡ ಸಂಪತ್ತಾದ ರೇಲ್ವೆ, ವಿಮಾನ ನಿಲ್ದಾಣಗಳು, ವಿದ್ಯುತ್ ಪ್ರಸರಣ ಮತ್ತು ಉತ್ಪಾದನಾ ಘಟಕಗಳು, ಬಿಎಸ್ಎನ್ಲ್, ಇಂಡಿಯನ್ ಏರಲೈನ್ಸ್ ಗಳನ್ನು ಖಾಸಗಿಯವರಿಗೆ ವಹಿಸಲು ಸಜ್ಜಾಗಿರುವುದು ಅಪಾಯದ ಮುನ್ಸೂಚನೆ ಎಂದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಇಂದು ದೇಶದ ಬಹುಪಾಲು ಜನರು ಆರ್ಥಿಕ ನೆರವು ಪಡಯುತ್ತಿರುವುದಕ್ಕೆ ಇಂದಿರಾಗಾಂಧಿಯವರ ಬ್ಯಾಂಕುಗಳ ಖಾಸಗೀಕರಣವೇ ಕಾರಣವಾಗಿದೆ.
ಆದರೆ, ಭಾರತ ಇಂದು ಎಲ್ಲ ರಂಗದಲ್ಲಿಯೂ ಸಂದಿಗ್ಧ ಸ್ಥಿತಿಯಲ್ಲಿದೆ. ಮೋದಿ ನಾಯಕತ್ವದ ಸರಕಾರ ದೇಶದ ಅಭಿವೃದ್ಧಿಯ ಧ್ಯೋತಕವಾದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.
ಸಣ್ಣ-ಪುಟ್ಟ ಉದ್ದಿಮೆಗಳು, ಕೃಷಿ ಸಮುದಾಯ ಆರ್ಥಿಕ ನೆರವು ಇಲ್ಲದ ಪರಿಣಾಮ ಅಭಿವೃದ್ಧಿ ಕುಂಠಿತವಾಗಿದೆ. ಕೇಂದ್ರದ ತಪ್ಪು ವಿದೇಶಾಂಗ ನೀತಿಗಳಿಂದ ಭಾರತ ಜಾಗತಿಕ ಮಟ್ಟದಲ್ಲಿ ಒಂಟಿಯಾಗುತ್ತಿದೆ. ಆದರೂ, ಮೋದಿ ಸರಕಾರ ಜನರನ್ನು ಭಾವನಾತ್ಮಕವಾಗಿ ಬೇರೆಡೆ ಗಮನಹರಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಮತ್ತೀಕಟ್ಟಿ ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಶರಣಪ್ಪ ಕೊಟಗಿ, ಮಂಜುನಾಥ ಭೋವಿ, ಎಸ್.ಎ.ಪವಾರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.