ಧಾರವಾಡ prajakiran.com : ರಾಜ್ಯ ಸರಕಾರ ಕೋವಿಡ್ 19 ಕರ್ತವ್ಯಕ್ಕೆ ಸರಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸುತ್ತಿದೆ.
ಆದರೆ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದೆ.
ಇದು ರಾಜ್ಯಾದ್ಯಂತ ಶಿಕ್ಷಕ ಸಮುದಾಯಕ್ಕೆ, ಸರಕಾರಿ ನೌಕರರಿಗೆ ಸಂಕಷ್ಟ ಹಾಗೂ ಆತಂಕಕ್ಕೆ ಸಿಲುಕಿಸಿದೆ.
ಬೆಂಗಳೂರು ಉತ್ತರ ವಲಯ 3ರ ಸರಕಾರಿ ಉರ್ದು ಮಾದರಿ ಶಾಲೆ ಡಿ. ಜೆ.ಹಳ್ಳಿಯ ಸಹ ಶಿಕ್ಷಕಿ ಯಾದಂತಹ ಶ್ರೀಮತಿ ದಿಲನಾಜ್ ಬೇಗಂ ಅವರು ಕರೋನಾ ಪಾಸಿಟಿವ್ ಬಂದು ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿರುವರು ನಿಜಕ್ಕೂ ಗಂಭೀರ ಹಾಗೂ ಕಳವಳಕಾರಿ ಸಂಗತಿಯೆಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ ತಿಳಿಸಿದ್ದಾರೆ.
ಕರೋನಾ ನಿಯಂತ್ರಣ ಕರ್ತವ್ಯದಲ್ಲಿ ಮುಂಚೂಣಿಯಲ್ಲಿರುವ ಸರಕಾರಿ ನೌಕರರಿಗೆ ಸಕಾಲಕ್ಕೆ ಚಿಕಿತ್ಸೆ ಇಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ಎಲ್ಲ ನೌಕರರನ್ನು ,ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ 50ಲಕ್ಷ ವಿಮೆ ಯೋಜನೆಗೆ ಪರಿಗಣಿಸುವುದು.
ಸಾರ್ವಜನಿಕರ ಸೇವೆಯಲ್ಲಿ ತೊಡಗಿ ಸರಕಾರಿ ನೌಕರರಿಗೆ ನಗದು ರಹಿತ ಆದ್ಯತೆಯ ಚಿಕಿತ್ಸೆಯನ್ನು ಎಲ್ಲ ಆಸ್ಪತ್ರೆಗಳಲ್ಲಿ ದೊರೆಯುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ಕೆಲಸ ನಿರ್ವಹಿಸುವವರಿಗೆ ಸೋಂಕಿನ ಲಕ್ಷಣಗಳು ಬಂದರೆ ಕ್ವಾರಂಟೈನ್ ರಜೆ ಸಹಿತ ಇಲ್ಲ. ಸೀಲ್ ಡೌನ್ ಪ್ರದೇಶದಲ್ಲಿದ್ದರೆ ಸ್ವಂತ ರಜೆ ಹಾಕಬೇಕು.
ಇದನ್ನು ದಯವಿಟ್ಟು ತಡೆಗಟ್ಟಿ ,ಈ ಹಿಂದೆ ಕುಟುಂಬ ಸಮೀಕ್ಷೆ ಕಾರ್ಯ ಮಾಡಿದರೂ ಶಿಕ್ಷಕರಿಗೆ ಒಂದು N95 ಮಾಸ್ಕ್,ಸ್ಯಾನಿಟೈಜ್ ಕೊಟ್ಟಿಲ್ಲ ಎಲ್ಲವನ್ನೂ ಸ್ವಂತದ್ದರಲ್ಲಿಯೇ ನಿರ್ವಹಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಯವಿಟ್ಟು ಪ್ರಸ್ತುತ ಸರ್ಕಾರ ಸರಕಾರಿ ನೌಕರರ ಮನಸ್ಥಿತಿ ಬಲಪಡಿಸಲು ವಿಮೆ ಯೋಜನೆ, ಸುರಕ್ಷತಾ ಸಾಮಗ್ರಿಗಳು, ರಜೆಗಳ ಘೋಷಣೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಇಂತಹ ಆರ್ಥಿಕ ಸಂಕಷ್ಟದಲ್ಲೂ ವೇತನ ಕಡಿತಗೊಳಿಸದೇ ಸಕಾಲಕ್ಕೆ ವೇತನ ನೀಡಿರುವುದಕ್ಕೆ ಧನ್ಯವಾದಗಳು.
ಅದೇ ರೀತಿ ಸೂಕ್ತ ಸೌಲಭ್ಯಗಳನ್ನು ಮತ್ತು ಸರಕಾರಿ ನೌಕರರಿಗೆ ಪ್ರತ್ಯೇಕ ಚಿಕಿತ್ಸಾ ಕೇಂದ್ರಗಳನ್ನು ಮೀಸಲಿರಿಸಿ ನಗದುರಹಿತ ಚಿಕಿತ್ಸೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಖಾಯಿಲೆ ಇರುವ ಶಿಕ್ಷಕಿಯರನ್ನು ಹಾಗೂ 50 ವರ್ಷ ಮೇಲ್ಪಟ್ಟವರನ್ನು ಈ ಕಾರ್ಯದಿಂದ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.