ಧಾರವಾಡ prajakiran.com : ಧಾರವಾಡ ತಾಲೂಕಿನ ಗರಗ ರಸ್ತೆಯಲ್ಲಿರುವ ಟಾಟಾಮಾರ್ಕೊಪೊಲೊ ಕಂಪನಿಯನ್ನು ಜುಲೈ 26ರಿಂದ ಬರುವ ಸೋಮವಾರ ಆಗಸ್ಟ್ 3 ರವರೆಗೆ ಮುಚ್ಚಲು ಕಾರ್ಖಾನೆ ಆಡಳಿತ ಮಂಡಳಿ ನಿರ್ಧರಿಸಿದೆ.
ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಂಪನಿಯ ಸಿಇಓ ಅವರೊಂದಿಗೆ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಂಪನಿಯ ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಸ್ಯಾನಿಟೈಸೇಷನ್, ತಪಾಸಣೆ ನಿರಂತರವಾಗಿ ನಡೆಸಲಾಗುತ್ತಿದೆ.
ಕಾರ್ಮಿಕರು,ಸಿಬ್ಬಂದಿ ಹಾಗೂ ಕಂಪನಿಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಂಟು ದಿನಗಳ ಕಾಲ ಕೈಗಾರಿಕಾ ಘಟಕದ ಚಟುವಟಿಕೆಗಳನ್ನು ಎಂಟು ದಿನಗಳ ಕಾಲ ಸ್ಥಗಿತಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿಯು ಸ್ವಯಂ ಪ್ರೇರಿತರಾಗಿ ನಿರ್ಣಯಿಸಿದೆ.
ಕಾರ್ಮಿಕರು ಧೃತಿಗೆಡದಿರಲು ಮನವಿ :
ಕೊರೊನಾ ಒಂದು ದುರ್ಬಲ ವೈರಾಣುವಾಗಿದೆ. ಸರಳ ಚಿಕಿತ್ಸೆ ಮೂಲಕ ಸೋಂಕು ನಿವಾರಿಸಿಕೊಳ್ಳಬಹುದಾಗಿದೆ.
ಕೊರೊನಾ ಭಯದಿಂದ ಯಾರೊಬ್ಬರೂ ಧೃತಿಗೆಡಬಾರದು, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು.
ಸೋಂಕಿತರಿಗೆ ಮತ್ತು ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ನಿರಂತರವಾಗಿ ದೂರವಾಣಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ.
ದೂರವಾಣಿ ಸಂಪರ್ಕ ಲೈನ್ ಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.
ಧಾರವಾಡ ಮಾನಸಿಕ ಆರೋಗ್ಯವಿಜ್ಞಾನ ಸಂಸ್ಥೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಮತ್ತು ಆಯುಷ್ ವಿಭಾಗಗಳ ಮೂಲಕ ಮನೋ ಸ್ವಾಸ್ಥ್ಯ ನಿರ್ವಹಣೆಗೆ ವಿಡಿಯೋ ಸಂವಾದದ ಮೂಲಕ ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ.
ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಜಿಲ್ಲೆಯ ಜನತೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ನಿನ್ನೇಯಷ್ಟೇ ಕಂಪನಿಯ ನೌಕರನೊಬ್ಬ 34 ಜನರಿಗೆ ಕರೋನಾ ಸೋಂಕು ಆವರಿಸಿದ್ದರಿಂದ ಆತ್ಮಸ್ಥೈರ್ಯ ಕಳೆದುಕೊಂಡು ಕರೋನಾಕ್ಕೆ ಹೆದರಿ ತನ್ನ ಪತ್ನಿ ಹಾಗು ಮಗಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.