ಕೊಪ್ಪಳ Prajakiran.com : ಕಳೆದ ಹಲವು ದಶಕಗಳಿಂದ ಧಾರವಾಡದ ಸಹಸ್ರಾರು ಜನರ ಪ್ರೀತಿ ಗೌರವಕ್ಕೆ ಪಾತ್ರವಾದ ಇಂದುಬಾಯಿ ವಾಜಪೇಯಿ ಅಲಿಯಾಸ್ ಧಾರವಾಡದ ಹೇಮಾಮಾಲಿನಿ ನಿನ್ನೆ ಮಧ್ಯರಾತ್ರಿ ಕೊಪ್ಪಳದ ಆಶ್ರಮದಲ್ಲಿ ವಿಧಿವಶರಾಗಿದ್ದಾರೆ.
ಕಳೆದ ಹಲವು ದಿನಗಳಿಂದಅಲ್ಲಿಯೇ ಆಶ್ರಯ ಪಡೆದಿದ್ದಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಅವರು ಇದಕ್ಕೂ ಮೊದಲು ರಾಯಾಪುರದ ನಿರ್ಗತಿಕರ ಕೇಂದ್ರದಲ್ಲಿ ರಕ್ಷಣೆ ಪಡೆದಿದ್ದರು.
ಇದಕ್ಕೂ ಮೊದಲು ಅವರು ನೂರಾರು ಜನರಿಗೆ ಭಿಕ್ಷೆ ಬೇಡದೆ ಸ್ವಾಭಿಮಾನದಿಂದ ಬದುಕುವ ಪಾಠ ಹೇಳಿ ಮಾದರಿಯಾಗಿದ್ದರು.
ಧಾರವಾಡದ ಪ್ರತಿ ಬೀದಿ ಆಳಿದ-ಅಲೆದ ಇಂದುಬಾಯಿ ವಾಜಪೇಯಿ… ಅಲಿಯಾಸ್ ಧಾರವಾಡದ ಹೇಮಾಮಾಲಿನಿ ಅವರು ಖೋಯಾ ಖೋಯಾ ಚಾಂದ್… ದೊಡ್ಡ ಧ್ವನಿಯಲ್ಲಿ ಹಾಡುತ್ತಾ ಚಿರಕಾಲ ನೆನಪಾಗುವಂತೆ ಮಾಡಿದ್ದರು.
ಅಲ್ಲದೆ, ಬಹುತೇಕರ ಪಡ್ಡೆಹುಡುಗರ ಬಾಲ್ಯಕ್ಕೊಂದು ಕಿಡಗೇಡಿತನ ಕಲಿಸಿದ, ನಮ್ಮ ಹುಚ್ಚು ತರಲೆ ಸಹಿಸಿದ, ಆ ಕಾಲಕ್ಕೆ ಎಂ.ಎ.ಸ್ನಾತಕೋತ್ತರ ಮುಗಿಸಿದ, ಯಾವುದೋ ಕಾಲೇಜಲ್ಲಿ ತನ್ನ ಸಹಪಾಠಿಗಳ ಜೊತೆ ಉಪನ್ಯಾಸಕಿ ಆಗಬೇಕಿದ್ದ ಈ ಹೇಮಾ ಮಾಲಿನಿ ಅದ್ಭುತ ಇಂಗ್ಲೀಷ್, ಹಿಂದಿ, ಮರಾಠಿ, ಕನ್ನಡ ಮಾತು- ಹಾಡುಗಳ ಮೂಲಕ ಧಾರವಾಡದ ಜನತೆಗೆ ಚಿರಪರಿಚಿತರಾಗಿದ್ದರು.
ಧಾರವಾಡದ ಹೇಮಾಮಾಲಿನಿ ಇನ್ನಿಲ್ಲವೆಂಬುದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು,ಅನೇಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅವರೊಂದಿಗಿನ ಒಡನಾಟ, ಸವಿ ಸವಿ ನೆನಪು, ನುಡಿನಮನ, ಶ್ರದ್ದಾಂಜಲಿ, ಕಿಡಿಗೇಡಿತನವನ್ನು ಸ್ಮರಿಸಿಕೊಂಡು ಧನ್ಯತಾ ಭಾವ ಮೆರೆದಿದ್ದಾರೆ.