ಧಾರವಾಡ prajakiran.com : ಧಾರವಾಡದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಸಾಧನಕೇರಿಯ ಬಳಿಯ ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ್ ಪ್ಲಾಟ್ ನ ಹಲವಾರು ಮನೆಗಳಿಗೆ ನೀರು ನುಗ್ಗಿದೆ.
ಅಷ್ಟೇ ಅಲ್ಲದೆ, ಮುಂದೆ ಸಾಧನಕೇರಿಯ ನೀರು ಕೋಡಿ ಹರಿದು ಬ್ರಹ್ಮಚೈತನ್ಯ ಪಾರ್ಕ್ ನಲ್ಲಿ ಕೂಡ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅದೇ ರೀತಿ ದೊಡ್ಡ ನಾಯಕನಕೊಪ್ಪ, ಕೆ.ಎಚ್. ಬಿ ಕಾಲೋನಿಯ ಹಲವಾರು ಮನೆಗಳಿಗೆ ನೀರು ನುಗ್ಗಿದೆ.
ನೀರಿನ ರಭಸಕ್ಕೆ ಜನತೆ ಕಕ್ಕಾಬಿಕ್ಕಿಯಾಗಿದ್ದು, ಹಲವು ಗಂಟೆಗಳ ಕಾಲ ಜನತೆ ಕಂಗಾಲಾಗಿದ್ದು, ಅಕ್ಷರಶಃ ನಲುಗಿಹೋಗಿದ್ದು ಕಂಡು ಬಂತು.
ಇದರಿಂದಾಗಿ ಕೆಎಚ್ ಬಿ ಕಾಲೋನಿಯ ನಿವಾಸಿಗಳು ಕೂಡ ಪರದಾಡುವಂತಾಗಿದೆ. ಪ್ರತಿ ಬಾರಿ ದೊಡ್ಡ ಮಳೆಯಾದಾಗ ಜನರ ಗೋಳು ಹೇಳತೀರದಂತಿದೆ. ಈ ಬಗ್ಗೆ ನಿಗಾವಹಿಸಬೇಕಾದ ಗ್ರಾಮೀಣ ಶಾಸಕರು ಜನರ ಸಂಕಷ್ಟ, ಸಮಸ್ಯೆ ಆಲಿಸದಿರುವುದು ದುರಂತದ ಸಂಗತಿಯಾಗಿದೆ ಎಂದು ಸ್ಥಳೀಯ ಜನತೆ ಕಿಡಿಕಾರಿದರು.
ಇದರಿಂದಾಗಿ ಧಾರವಾಡ ಗ್ರಾಮೀಣ ಶಾಸಕರ ವಿರುದ್ದ ಜನತೆಯ ಆಕ್ರೋಶ ಸ್ಪೋಟಗೊಂಡಿದ್ದು, ಕೆಲ ಕಾಲ ಜನತೆ ಜೀವವನ್ನು ತಮ್ಮ ಕೈ ಯಲ್ಲಿ ಹಿಡಿದುಕೊಂಡು ಬದುಕುವಂತಾಯಿತು.
ಮಕ್ಕಳು ಹಿರಿಯ ನಾಗರಿಕರನ್ನು ಹೊಂದಿದವರು ದಿಕ್ಕು ಕಾಣದೆ ಕಂಗಾಲಾಗಿದ್ದರು. ಹಲವಾರು ವರ್ಷಗಳಿಂದ ಈ ಬಗ್ಗೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಜನಜಾಗೃತಿ ಸಂಘದಅಧ್ಯಕ್ಷ ಬಸವರಾಜ ಕೊರವರ ಅವರು ಎಲ್ಲಾ ಬಡಾವಣೆಗಳಿಗೆ ತೆರಳಿ, ಅನಾಹುತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಜನರ ಬಳಿ ಅಹವಾಲು ಆಲಿಸಿದರು.
ಅಲ್ಲದೆ, ಮಳೆಯಅವಾಂತರವನ್ನು ಕಣ್ಣಾರೆ ಕಂಡು ಈ ಬಗ್ಗೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಕಳೆದ ಹಲವು ವರ್ಷಗಳಿಂದ ಸರಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ.ಜನಪ್ರತಿನಿಧಿಗಳು ವಸ್ತು ಸ್ಥಿತಿಅರಿಯುವ ಕೆಲಸ ಕೂಡ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಜನತೆ ಮಳೆಯ ನೀರನ್ನು ಹೊರ ಹಾಕಲು ಹರಸಾಹಸ ನಡೆಸುವಂತಾಗಿದೆ. ಪ್ರತಿ ಬಾರಿಯೂ ಮಳೆ ಬಂದರೆ ಸಾಕು ಜನರ ಗೋಳು ಹೇಳತೀರದಂತಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದ್ದಾರೆ.
ಕಳೇದ ಬಾರಿ ಕೂಡ ಅತಿವೃಷ್ಟಿಯಾಗಿದ್ದಾಗ ಕೋಟ್ಯಾಂತರ ರೂಪಾಯಿ ಅನುದಾನ ಬಂದರೂ ಅಗತ್ಯ ಕಾಮಗಾರಿ ಕೈಗೊಳ್ಳದೆ ಅಗತ್ಯವಿಲ್ಲದ ಕಡೆ ಕೆಲಸ ಮಾಡಿ ಜನಪ್ರತಿನಿಧಿಗಳು ಅಧಿಕಾರಿಗಳು ಕೈ ತೊಳೆದುಕೊಂಡರು ಎಂದು ಕೊರವರ ಬೇಸರ ವ್ಯಕ್ತಪಡಿಸಿದರು.