ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನ ಹಿಂದೆಯೇ ಗುರುವಾರ ನಡೆದ ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಗೆ ೯೧೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಜಿಲ್ಲೆಯಲ್ಲಿ ೨೦೧೯೮ ವಿದ್ಯಾರ್ಥಿಗಳು ಪಿಯು ಇಂಗ್ಲೀಷ್ ಪರೀಕ್ಷೆಗೆ ಅರ್ಹತೆ ಪಡೆದು ಪ್ರವೇಶ ಪತ್ರಗಳನ್ನು ಪಡೆದಿದ್ದರು.
ಆದರೆ ಅವರಲ್ಲಿ ೧೯೨೮೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ೯೧೭ ಜನ ಗೈರಾಗಿದ್ದರು ಎಂದು ಪದವಿ ಪೂವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಾರದಾ ಕಿರೇಸೂರ ತಿಳಿಸಿದ್ದಾರೆ.
ಇದನ್ನು ಹೊರತುಪಡಿಸಿದರೆಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಗುರುವಾರ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪಿಯು ದ್ವಿತೀಯ ವರ್ಷದ ಆಂಗ್ಲ ಭಾಷಾ ಪರೀಕ್ಷೆಯು ಯಾವುದೇ ಗೊಂದಲ ಮತ್ತು ತೊಂದರೆ ಇಲ್ಲದೇ ಸುಸೂತ್ರವಾಗಿ ಜರುಗಿತು.
ಪಿಯುಸಿ ದ್ವಿತೀಯ ವರ್ಷದ ಇಂಗ್ಲೀಷ್ ಪರೀಕ್ಷೆಗಾಗಿ ಹುಬ್ಬಳ್ಳಿಯಲ್ಲಿ ೧೬, ಧಾರವಾಡದಲ್ಲಿ ೧೭, ಕಲಘಟಗಿ ಮತ್ತು ನವಲಗುಂದದಲ್ಲಿ ತಲಾ ೨ ಮತ್ತು ಕುಂದಗೋಳದಲ್ಲಿ ೧ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು.
ವಾ.ಕ.ರ.ಸಾ.ಸಂ ನಿಂದ ಉಚಿತವಾಗಿ ವಿದ್ಯಾರ್ಥಿಗಳ ಸಂಚಾರಕ್ಕಾಗಿ ೩೦೦ ಬಸ್ಗಳನ್ನು ಒದಗಿಸಲಾಗಿತ್ತು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ಗೊಂದಲ ಒತ್ತಡಗಳಿಲ್ಲದೆ ನಿರಾಳವಾಗಿ ಪರೀಕ್ಷೆ ಬರೆದರು.
ಪ್ರತಿ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಮತ್ತು ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಪೂರೈಸಲಾಗಿತ್ತು.
ಸಾಮಾಜಿಕ ಅಂತರದೊಂದಿಗೆ ಪರೀಕ್ಷೆಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಆರೋಗ್ಯದ ಸ್ಥಿತಿ ದಾಖಲಿಸಿಕೊಳ್ಳಲಾಯಿತು.
ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ನಿಗದಿತ ಸಮಯಕ್ಕೆ ಪರೀಕ್ಷೆಗಳು ಪ್ರಾರಂಭವಾಗಿ ಯಾವುದೇ ಗೊಂದಲಗಳಿಲ್ಲದೆ ನಿಗದಿತ ಅವಧಿಯೊಳಗೆ ಮುಕ್ತಾಯವಾದವು.
ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು ಎಂದು ಪದವಿ ಪೂವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಾರದಾ ಕಿರೇಸೂರ ತಿಳಿಸಿದ್ದಾರೆ.