ಧಾರವಾಡ prajakiran.com : ಜಿಲ್ಲೆಯಲ್ಲಿ ಸಂಡೆ ಲಾಕ್ ಡೌನ್ ಹಾಗೂ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಸ್ವತ: ಅವಳಿನಗರದಲ್ಲಿ ಗಸ್ತು ಸಂಚಾರ ಮಾಡಿ, ಭಾನುವಾರ ಪರಿಶೀಲಿಸಿದರು.
ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಕೋರ್ಟ ಸರ್ಕಲ್, ಲೈನ್ ಬಜಾರ, ಬೂಸಪ್ಪ ಚೌಕ್, ಕಾಮನಕಟ್ಟಿ, ಹೊಸ ಯಲ್ಲಾಪುರ, ಗಾಂಧಿಚೌಕ, ಹೆಬ್ಬಳ್ಳಿ ಅಗಸಿ, ಶಿವಾಜಿ ಸರ್ಕಲ್, ಓಲ್ಡ್ ಎಸ್ಪಿ ಸರ್ಕಲ್, ಜರ್ಮನ್ ಆಸ್ಪತ್ರೆ ಸರ್ಕಲ್, ಸಾಧನಕೇರಿ, ದೊಡ್ಡನಾಯಕನಕೊಪ್ಪ, ಬನಶಂಕರಿನಗರ, ದಾಸನಕೊಪ್ಪ ಸರ್ಕಲ್, ಕೆಸಿಡಿ ವೃತ್ತದ ವರೆಗೆ ಸಂಚರಿಸಿ ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರಿಗೆ ತಿಳುವಳಿಕೆಯೊಂದಿಗೆ ಎಚ್ಚರಿಕೆ ನೀಡಿದರು.
ಅನಗತ್ಯವಾಗಿ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದ ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ ಆರು ಬೈಕ್ ಮತ್ತು ಎರಡು ಕಾರ್ಗಳನ್ನು ಪೊಲೀಸ್ ಆಯುಕ್ತರ ಸೂಚನೆ ಮೆರೆಗೆ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ಕರ್ಫ್ಯೂ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಿದರು.
ಪರಿಣಾಮಕಾರಿ ಲಾಕ್ ಡೌನ್ ಹಾಗೂ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ೨೫ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳೊಂದಿಗೆ ನಗರ ಸಂಚಾರ ಮಾಡಿ, ಮೈಕ್ ಮೂಲಕ ಜನರಿಗೆ ಕರೊನಾ ವೈರಸ್ ಹರಡದಂತೆ ನಿಯಂತ್ರಸುವಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರದ ಬಗ್ಗೆ ಸಂದೇಶ ನೀಡಿದರು..
ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-೧೯ ಕರೊನಾ ವೈರಾಣು ಹರಡದಂತೆ ಸರಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದರು.
ಸಂಡೆ ಲಾಕ್ಡೌನ್ ಹಾಗೂ ಕರ್ಫ್ಯೂವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿ ಆಗಿರುವ ಕುರಿತು ಪರಿಶೀಲಿಸಲು ಸ್ವತ: ನಾನೆ ಪೊಲೀಸ್ ಆಯುಕ್ತರೊಂದಿಗೆ ಅವಳಿನಗರ ಸಂಚಾರ ಮಾಡಿದ್ದೇನೆ ಎಂದರು.
ಕರೊನಾ ವೈರಾಣು ಕರೊನಾ ವಾರಿಯರ್ಸ್ ಗಳಾದ ಆರೋಗ್ಯ, ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಸೋಂಕು ಹರಡುತ್ತಿದೆ.
ಈ ಕುರಿತು ಜಾಗೃತಿವಹಿಸಲು ಆರೋಗ್ಯ ರಕ್ಷಣಾ ಕ್ರಮಗಳ ಕುರಿತು ಇಲಾಖೆಗಳ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಮುನ್ನೆಚರಿಕೆ ಕ್ರಮಗಳನ್ನು ತಿಳಿಸಲಾಗಿದೆ.
ಅವರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸೋಂಕಿತ ಸಿಬ್ಬಂದಿಗಳಿಗೆ ಪ್ರತ್ಯೇಕ ಕೋವಿಡ್ ಹಾಸ್ಪಿಟಲ್ ಗುರುತಿಸಿ, ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪೊಲೀಸ್ ಇಲಾಖೆ ಅಧಿಕಾರಿಗಳ ಕೋರಿಕೆಯಂತೆ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗುವ ಆರೋಪಿಗಳಿಗೆ ಕೊವೀಡ್ ತಪಾಸಣೆ ಮಾಡಲು ಮತ್ತು ಪ್ರತ್ಯೇಕವಾಗಿ ಇಡಲು ಕೋವಿಡ್ ಸೆಂಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ಸಂಡೆ ಲಾಕ್ಡೌನ್ ಮತ್ತು ಕರ್ಫ್ಯೂ ಆದೇಶವನ್ನು ಅವಳಿನಗರದಲ್ಲಿ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ. ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಪ್ರತಿ ಸಿಬ್ಬಂದಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಫೇಸ್ಶೀಲ್ಡ್ಗಳನ್ನು ವಿತರಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳಿಗೂ ಕೊರೊನಾ ಸೋಂಕು ತಗಲುತ್ತಿದ್ದು, ಅವರ ಆರೈಕೆ ಹಾಗೂ ಸುರಕ್ಷತೆಗಾಗಿ ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ನಮ್ಮ ಕೋರಿಕೆ ಮೇರೆಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸೌಲಭ್ಯ ಕಲ್ಪಿಸಿದೆ.
ಆರೋಪಿಗಳ ಕೋವಿಡ್ ಪರೀಕ್ಷೆ ಹಾಗೂ ಸುರಕ್ಷಿತವಾಗಿ ಇಡಲು ಅನುಕೂಲವಾಗುವಂತೆ ಅದಕ್ಕೂ ಪ್ರತ್ಯೇಕ ಕೋವಿಡ್ ಸೆಂಟರ್ ಮಾಡಿಕೊಟ್ಟಿದ್ದಾರೆ.
ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಗೆ ಬರದೇ, ರಸ್ತೆಯಲ್ಲಿ ಸಂಚರಿಸದೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಳ್ಳುವ ಕ್ರಮಗಳಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.