ಧಾರವಾಡ prajakiran.com : ಮಗನಿಗೆ ಕಾಡಿಸಬೇಡಿ ಎಂದು ಬುದ್ದಿ ಹೇಳಲು ಹೋದ ತಂದೆಗೆ ಹಾಗೂ ಮಗನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಗುವೊಂದು ಸೈಕಲ್ ತೆಗೆದುಕೊಂಡು ಧಾರವಾಡದ ಶಿವಾನಂದ ನಗರದಲ್ಲಿ ಮುಕ್ತುಂ ಸೊಗಲದ ಮನೆಯ ಮುಂದೆ ಓಡಾಡಿದ್ದ. ಆಗ ಹುಡುಗನ ಸೈಕಲ್ ಚಾವಿ ಕಸೆದುಕೊಂಡು ಈ ಹುಡುಗರು ಕಪಾಳಕ್ಕೆ ಹೊಡೆದಿದ್ದರು.
ಹಲ್ಲೆಗೊಳಗಾದ ಮಗು ಈ ವಿಷಯವನ್ನು ತನ್ನ ತಂದೆಯ ಗಮನಕ್ಕೆ ತಂದಿದ್ದ. ಇದನ್ನು ಪ್ರಶ್ನಿಸಿ ಬುದ್ದಿ ಹೇಳಲು ಹೋದ ತಂದೆಗೆ ನಮಗೇನು ಬುದ್ದಿ ಹೇಳ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು ಹಾಗೂ ಇಟ್ಟಂಗಿಯಿಂದ ಮನಬಂದಂತೆ ಥಳಿಸಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡಿರುವ ಮಹ್ಮದಾರ್ ಆಫೀಕ್ ಮೆಹಬೂಬಾಲಿ ಮುಲ್ಲಾ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ತಲೆಗೆ ಹಾಗೂ ದೇಹಕ್ಕೆ ತೀವ್ರ ಪೆಟ್ಟಾಗಿದ್ದು, ಮಗ ಕೂಡ ಗಾಯಗೊಂಡಿದ್ದಾನೆ.
ಹಲ್ಲೆ ಮಾಡಿದವರನ್ನು ಸಾಗರ ಕಲಾಲ, ಸೋಹೆಲ್ ಬಂಡಾರ, ಸಾಹೀಲ್ ಬಾಂಗ್ಲೇವಾಲೆ, ಸುಪಿಯಾನಾ ಬಾಂಗ್ಲೇವಾಲೆ ಹಾಗೂ ಇತರ ಮೂರು ನಾಲ್ಕು ಜನರ ತಂಡ ಎಂದು ಗುರುತಿಸಲಾಗಿದೆ.
ಈ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.