ಬಾಗಲಕೋಟೆ prajakiran.com : ತನ್ನ ಪತಿ ಎರಡನೇ ಮದುವೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲು ಹೋದ ಪತ್ನಿ ಹಾಗೂ ಸಂಬಂಧಿಕರ ಮೇಲೆಯೇ ಪೊಲೀಸರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಘಟನೆ ಬಾಗಲಕೋಟೆಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ದೂರು ನೀಡಲು ಹೋದ ನೊಂದ ಪತ್ನಿ , ಸಂಬಂಧಿಕರ ಮೇಲೆ ಕಲಾದಗಿ ಪೊಲೀಸ್ ಠಾಣೆಯ ಪಿಎಸ್.ಐ ರವಿ ಪವಾರ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಅವರ ದರ್ಪಕ್ಕೆ ರೋಸಿಹೋದ ನೊಂದ ಕುಟುಂಬಸ್ಥರು ಪಿಎಸ್ಐ ವಿರುದ್ಧ ನ್ಯಾಯಕ್ಕಾಗಿ ಎಸ್ಪಿ ಮೊರೆ ಹೋಗಿದ್ದಾರೆ.
ಲಕ್ಷ್ಮೀಬಾಯಿ, ಸಚೀನ್ ಗಿಡ್ಡಿ, ಶ್ರೀಕಾಂತ್ ಕಲಾದಗಿ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಲಾದಗಿ ಪಿ.ಎಸ್.ಐ ರವಿ ಪವಾರ್ ಹಾಗೂ ಸಿಬ್ಬಂದಿಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಹಲ್ಲೆಗೊಳಗಾದ ಸಚೀನ್ ಗಿಡ್ಡಿ, ಶ್ರೀಕಾಂತ್ ಕಲಾದಗಿ ಅವರು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಆಗಿ , ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಣ್ಣು, ತಲೆಯ ಭಾಗ, ಎದೆಗೆ ಬಲವಾಗಿ ಒದ್ದದ್ರಿಂದ ಅಸ್ವಸ್ಥಗೊಂಡಿರೋ ಸಚಿನ್ ಹಾಗೂ ಶ್ರೀಕಾಂತ್ ಚೇತರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಪಿಎಸ್ಐ ಯಾವುದೋ ಒತ್ತಡಕ್ಕೊಳಗಾಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.
ಲಕ್ಷ್ಮೀಬಾಯಿ ಹಾಗೂ ರಂಗಪ್ಪ ಮಧ್ಯೆ ಮದುವೆಯಾಗಿ ೨೦ ವರ್ಷಗಳಾಗಿವೆ. 15ವರ್ಷದ ಮಗಳಿದ್ರೂ ಮತ್ತೊಂದು ಮದುವೆ ಮಾಡಿಕೊಂಡು, ಸದ್ಯ ಎರಡನೇ ಮದುವೆಯಾಗಿರುವ ರಂಗಪ್ಪ ಕಲಾದಗಿ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯ ಕೊಡಿಸಿ ಎಂದು ಕೇಳಲು ಹೋದ ಮಹಿಳೆಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾರೆ.
ಜೊತೆಗೆ ರಂಗಪ್ಪನ ಸಹೋದರಿ ಗಂಗವ್ವ ಹುಲ್ಲಾರ ಎರಡನೇ ಮದುವೆ ಮಾಡಿಸಿದ್ದಾರೆ.
ರಂಗಪ್ಪ ಜೊತೆ ಎರಡನೇ ಮದುವೆ ಆಗಿರೋ ಪವಿತ್ರಾ ವಿರುದ್ಧ ದಾಖಲೆ ತೆಗೆದುಕೊಂಡು ಹೋದ್ರೂ ದೂರು ದಾಖಲಿಸಿಕೊಳ್ಳದ ಪಿಎಸ್ಐ ರವಿ ಪವಾರ್, ಪೊಲೀಸ್ ಪೇದೆ ತೇರದಾಳ, ಶೆಟ್ಟರ್ ಹಲ್ಲೆ ಮಾಡಿದ್ದು, ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.