ಧಾರವಾಡ prajakiran.com : ಕೇವಲ 50 ಸಾವಿರಕ್ಕೆ 2.5 ಲಕ್ಷ ರೂಪಾಯಿ ಮಾಡಿ ತಮ್ಮ ಬಡ್ಡಿ ಹಣ ಮರಳಿಸಿಲ್ಲ ಎಂದು ಐದು ತಿಂಗಳ ಗಂಡು ಮಗುವನ್ನ 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಕಿಡಿಗೇಡಿಗಳ ಹೆಡೆಮುರಿ ಕಟ್ಟುವಲ್ಲಿ ಧಾರವಾಡದ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ನಾಲ್ವರು
ಖದೀಮರನ್ನು ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಧಾರವಾಡದ ಭಾರತಿ ಮಂಜುನಾಥ ವಾಲ್ಮೀಕಿ, ರಮೇಶ ಮಂಜುನಾಥ ವಾಲ್ಮೀಕಿ, ರವಿ ಭೀಮಸೇನ ಹೆಗಡೆ ಹಾಗೂ ವಿನಾಯಕ ಅರ್ಜುನ ಮಾದರ ಎಂದು ಗುರುತಿಸಲಾಗಿದೆ., ಧಾರವಾಡದ ದಂಪತಿಗಳಿಗೆ ಬಡ್ಡಿ ದರದಲ್ಲಿ ಸಾಲ ನೀಡಿದ್ದ ಇವರು ಸಾಲವನ್ನ ಮರಳಿ ನೀಡುವಂತೆ ಪೀಡಿಸುತ್ತಿದ್ದರು.
ಆದರೆ ಕೊಟ್ಟ ಹಣ ಸಕಾಲಕ್ಕೆ ಮರಳದ್ದರಿಂದ ಆ ದಂಪತಿಗಳ ಗಂಡು ಮಗುವನ್ನ ಉಡುಪಿಯ ವಿಜಯ ಬಸಪ್ಪ ನೆಗಳೂರು ಹಾಗೂ ಚಿತ್ರ ವಿಜಯ ನೆಗಳೂರ ಎಂಬುವವರಿಗೆ 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿಸಿದ್ದರು. ಬಂದ ಹಣವನ್ನು ಈ ಆರೋಪಿಗಳು ಪಡೆದುಕೊಂಡಿದ್ದರು.
ಇದೀಗ ಮಗುವನ್ನು ಖರೀದಿಸಿದ ಆರೋಪದ ಮೇಲೆ ಉಡುಪಿಯ ವಿಜಯ ಬಸಪ್ಪ ನೆಗಳೂರು ಹಾಗೂ ಚಿತ್ರ ವಿಜಯ ನೆಗಳೂರ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ಬಸಾಪೂರ, ಪಿಎಸ್ಐ ಎಸ್.ಆರ್.ತೇಗೂರ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನ ಪತ್ತೆ ಹಚ್ಚಿ, ಮಾರಾಟವಾಗಿದ್ದ ಆ ಮಗುವನ್ನ ಧಾರವಾಡದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.