ಬೆಂಗಳೂರು prajakiran.com :
ಧಾರವಾಡ ಜಿಲ್ಲೆಯ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಷರತ್ತು ಬದ್ಧ ಜಾಮೀನು ನೀಡುವಂತೆ ಕೋರಿ ಅವರ ಪರ ವಕೀಲರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಎದುರು ಶನಿವಾರ ಸುದೀರ್ಘವಾದ ವಾದ ಮಂಡಿಸಿದರು.
ಅವರ ವಾದಕ್ಕೆ ಸಿಬಿಐ ಪರ ವಕೀಲರು ಮಂಗಳವಾರ ಮಾ. 9ರಂದು ಪ್ರತಿವಾದ ಮಂಡಿಸಲು ಅವಕಾಶ ನೀಡಿ ನ್ಯಾಯಾಲಯವು
ಪ್ರಕರಣದ ವಿಚಾರಣೆ ಯನ್ನು ಮಾ. 9ಕ್ಕೆ ಮುಂದೂಡಿದೆ.
ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲರು ನ್ಯಾಯಾಲಯದ ಎದುರು ಮಂಡಿಸಿದ ಎಲ್ಲಾ ದಾಖಲೆ ಹಾಗೂ ವಾದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು ಎನೆಲ್ಲಾ ಪ್ರತಿವಾದ ಮಂಡಿಸುತ್ತಾರೆ ಎಂಬುದು
ತೀವ್ರ ಕುತೂಹಲ ಕೆರಳಿಸಿದೆ.
ಸದ್ಯ ಮಾಜಿ ಸಚಿವ ವಿನಯ ಕುಲಕರ್ಣಿ ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿದ್ದು,
ಅವರನ್ನು ರಾಕೇಶ ರಂಜನ್ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ನವೆಂಬರ್ 5 ರಂದು ಬೆಳ್ಳಂ ಬೆಳಗ್ಗೆ ಧಾರವಾಡದ ಬಾರಾಕೋಟ್ರಿ ನಿವಾಸದಿಂದ ಕರೆದುಕೊಂಡು ಹೋಗಿ ಆನಂತರ ಸಂಜೆ ವೇಳೆಗೆ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.