ಧಾರವಾಡ ಪ್ರಜಾಕಿರಣ.ಕಾಮ್* : ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿ ಹಾಗೂ ಸಿಬ್ಬಂದಿಯೊಬ್ಬರ ನಡುವೆ ಮಾರಾಮಾರಿ ನಡೆದ ಪರಿಣಾಮ ಇಬ್ಬರು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೋಹನ ಬಡಿಗೇರ ಎಂಬ ಜೈಲು ಸಿಬ್ಬಂದಿ ಹಾಗೂ ಪ್ರಶಾಂತ್ ಅಲಿಯಾಸ್ ಪಾಚು ಎಂಬ ಕೈದಿ ನಡುವೆಯೇ ಈ ಮಾರಾಮಾರಿ ನಡೆದಿದೆ.
ಪ್ರಶಾಂತ ಎಂಬ ಕೈದಿ ಅನೇಕ ದಿನಗಳಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿಯೇ ಸೆರೆವಾಸ ಅನುಭವಿಸುತ್ತಿದ್ದಾನೆ.
ಇಂದು ಕ್ಷುಲ್ಲಕ ಕಾರಣಕ್ಕಾಗಿ ಕೈದಿ ಹಾಗೂ ಸಿಬ್ಬಂದಿ ಮಧ್ಯೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಪ್ರಶಾಂತ ಎಂಬ ಕೈದಿ ಬಾಚಣಿಕೆಯನ್ನೇ ಚಾಕುವಿನಂತೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಇಬ್ಬರು ಕೈ ಕೈ ಮಿಲಾಯಿಸಿದ್ದರಿಂದ ಇಬ್ಬರಿಗೂ ಗಾಯಗಳಾಗಿವೆ.
ಸದ್ಯ ಇಬ್ಬರನ್ನೂ ಧಾರವಾಡದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ಪ್ರಜಾಕಿರಣ.ಕಾಮ್ ಧಾರವಾಡ ಕೇಂದ್ರ ಕಾರಾಗೃಹ ಅಧೀಕ್ಷಕರನ್ನು ಸಂರ್ಪಿಕಿಸಿದರೆ ಗಲಾಟೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.