ರಾಜ್ಯ

ನಾಗರಾಜ ಗೌರಿ ಯಾರು ಎಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು…….!

ಧಾರವಾಡ prajakiran.com : ಇತ್ತೀಚೆಗೆ ಜರುಗಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ತಾವು ಕಾರಣ ಎಂದು ಬಿಂಬಿಸಿಕೊಳ್ಳುತ್ತಿರುವ ನಾಗರಾಜ ಗೌರಿ ವರ್ತನೆಗೆ ಪಾಲಿಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಿಕೆ ಸದಸ್ಯರಾದ ಇಮ್ರಾನ ಯಲಿಗಾರ, ಶಂಭುಗೌಡ ಸಾಲಮನಿ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ನಾಗರಾಜ ಗೌರಿ ಅವರ ಈ ಧೋರಣೆ ಕುರಿತು ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲ ಹಂತದ ಮುಖಂಡರ ಗಮನಕ್ಕೆ ತರುವುದಾಗಿ ಹೇಳಿದರು.

ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೧೦ ಜನ ಕಾಂಗ್ರೆಸ್ ಪಾಲಿಕೆ ಸದಸ್ಯರು ಆಯ್ಕೆಯ ಹಿಂದೆ ಮಾಜಿ ಮಂತ್ರಿ ಸಂತೋಷ್ ಲಾಡ, ವಿನಯ ಕುಲಕರ್ಣಿ, ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ಇಸ್ಮಾಯಿಲ್ ತಮಾಟಗಾರ ಹಾಗೂ ದೀಪಕ ಚಿಂಚೋರೆ ಅವರ ಪಾತ್ರ ಬಹು ಮುಖ್ಯವಾಗಿದೆ ಎಂದು ಹೇಳಿದರು.

ಇಸ್ಮಾಯಿಲ್ ತಮಟಗಾರ ಅವರು ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ನಂತರ ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲಿ ಸಂಚರಿಸಿ, ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಕೆಳ ಹಂತದಲ್ಲಿ ಪಕ್ಷವನ್ನು ಸಂಘಟಿಸಿದ ಫಲವಾಗಿ ಕ್ಷೇತ್ರದ ೧೦ ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಆಯ್ಕೆಯಾಗಿದ್ದಾರೆ.

ಜೊತೆಗೆ ಚುನಾಯಿತರಾಗಿರುವ ನಾವು ಕೂಡ ಕಳೆದ ೧೫-೨೦ ವರ್ಷಗಳಿಂದ ವಾರ್ಡಿನ ಜನರ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೇವೆ ಎಂದರು.

ಕೋವಿಡ್‌ನ ಲಾಕ್‌ಡೌನ್ ಸಂದರ್ಭದಲ್ಲಿ ವಿನಯ ಕುಲಕರ್ಣಿ, ಇಸ್ಮಾಯಿಲ್ ತಮಟಗಾರ ಹಾಗೂ ಹಿರಿಯರಾದ ದೀಪಕ್ ಚಿಂಚೋರೆ ಅವರ ಮಾರ್ಗದರ್ಶನದಲ್ಲಿ ಜನರಿಗೆ ಸೇವೆ ಒದಗಿಸಿದ್ದು ನಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ತಿರುಗೇಟು ನೀಡಿದರು.

ತಮಗೆ ಟಿಕೆಟ್ ಕೊಡಿಸುವ ಹಂತದಿಂದ ತಾವು ಆಯ್ಕೆಯಾಗುವ ವರೆಗೆ ಇಸ್ಮಾಯಿಲ್ ತಮಟಗಾರ ಬಹಳಷ್ಟು ಜವಾಬ್ದಾರಿ ಹೊತ್ತು ಗೆಲ್ಲಿಸಿದ್ದಾರೆ.

ಜೊತೆಗೆ ಹಲವಾರು ಮುಖಂಡರು ಪ್ರಚಾರದಲ್ಲಿ ಭಾಗವಹಿಸಿ, ಆಡಳಿತ ಪಕ್ಷದ ವೈಫಲ್ಯವನ್ನು ಜನರಿಗೆ ತಿಳಿಸುವ ಮುಖಾಂತರ
ನಮ್ಮ ಗೆಲುವಿಗೆ ಶ್ರಮಿಸಿದ್ದಾರೆ ಎಂದು ವಿವರಿಸಿದರು.

ಈ ಎಲ್ಲ ಕಾರಣಗಳಿಂದ ತಾವು ಚುನಾಯಿಸಲು ಸಾಧ್ಯವಾಗಿದೆ. ಹೊರತು ಬೇರೆ ಯಾರ ಬೆಂಬಲದಿಂದಲ್ಲ ಎಂದು ಕುಟುಕಿದರು. 

ವಾಸ್ತವ ಪರಿಸ್ಥಿತಿ ಹೀಗಿದ್ದರೂ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರು, ನಮ್ಮ ಗೆಲುವಿಗೆ ತಾವೊಬ್ಬರೇ ಕಾರಣ ಎಂದರ್ಥದಲ್ಲಿ ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ.

ನಮ್ಮ ವಾರ್ಡ್‌ಗಳಲ್ಲಿ ನಮ್ಮ ಪರ ಪ್ರಚಾರ ಕೂಡ ನಡೆಸದ ಇವರು ನಮ್ಮ ಗೆಲುವಿಗೆ ಹೇಗೆ ಕಾರಣರು ಎಂದು ಪ್ರಶ್ನಿಸಿದರು.

ಇಂತಹ ಕೀಳು ಪ್ರಚಾರ ಪಡೆಯುವ ಭರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ಸಾರ್ವಜನಿಕರನ್ನು ದಿಕ್ಕುತಪ್ಪಿಸುತ್ತಿದ್ದಾರೆ.

ಆದ್ದರಿಂದ ಗೌರಿ ಅವರು ಇಂತಹ ನೀತಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಅಲ್ಲದೇ ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ತರುವುದಾಗಿ ಸ್ಪಷ್ಟಪಡಿಸಿದರು.

ಮಾಜಿ ಮೇಯರ ದಾನಪ್ಪ ಕಬ್ಬೇರ, ಅಬ್ದುಲ ದೇಸಾಯಿ, ಪಾಲಿಕೆ ಸದಸ್ಯರಾದ ಗಣೇಶ ಮುಧೋಳ, ಮಂಜುನಾಥ ಬಡಕುರಿ, ಡಾ.ಮಯೂರ ಮೋರೆ, ಶಂಕರ ಹರಿಜನ ಮತ್ತಿತರರಿದ್ದರು.

ನಾಗರಾಜ ಗೌರಿ ಯಾರು?

ನಾಗರಾಜ ಗೌರಿ ಯಾರು?. ನಾವು ಅವರನ್ನು ಎಲ್ಲಿಯೂ ನೋಡಿಲ್ಲ. ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು ಎಲ್ಲಿ ಎಂದು ಪ್ರಶ್ನಿಸಿದರು -ಅಜಗರ ಮುಲ್ಲಾ,

ಪಾಲಿಕೆ ಸದಸ್ಯೆ ಬಿಲ್ಕಿಶ್‌ಬಾನು ಅವರ ಪತಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *