ಧಾರವಾಡ prajakiran.com : ರಾಜ್ಯದಲ್ಲಿ ಸಂಕಷ್ಟ ಎದುರಿಸುತ್ತಿರುವ 30 ಸಾವಿರ ಖಾದಿ ಕೆಲಸಗಾರರಿಗೆ ಕನಿಷ್ಠ ಬದುಕುವ ವೇತನ ಹಾಗೂ ಖಾದಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೊಳಿಸಿ ಖಾದಿ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ ಎಚ್ ನೀರಲಕೇರಿ ಮನವಿ ಸಲ್ಲಿಸಿದರು.
ಈ ಹಿಂದೆ ಕರ್ನಾಟಕ ರಾಜ್ಯ ಅತಿ ಹೆಚ್ಚು ಅನುದಾನ ನೀಡುವ ರಾಜ್ಯವಾಗಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಖಾದಿ ಉದ್ಯಮ ಅವಸಾನದ ಅಂಚಿಗೆ ಬಂದು ನಿಂತಿದೆ. ಆದಷ್ಟು ತ್ವರಿತವಾಗಿ ಸರ್ಕಾರ ಹಾಲು ಉತ್ಪಾದಕರಿಗೆ ಸಹಾಯ ಧನ ನೀಡುವಂತೆ ಖಾದಿ ಉದ್ಯಮಕ್ಕೆ ಸಹಾಯ ಧನ ನೀಡಬೇಕು.
ಇದರಿಂದ ಸರ್ಕಾರದ ಕೀರ್ತಿ ಹೆಚ್ಚುತ್ತದೆ. ಖಾದಿ ಉದ್ಯಮ ರಕ್ಷಿಸಿದ ಕೀರ್ತಿ ಸರ್ಕಾರಕ್ಕೆ ಬರುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಅದರಲ್ಲೂ ವಿಶೇಷವಾಗಿ
ನೂಲುವದು ಹಾಗೂ ನೇಯುವ ವರ್ಗ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಧಾರವಾಡ ಜಿಲ್ಲೆಯಲ್ಲಿ 6 ನೋಂದಣಿ ಸಂಘಗಳಿದ್ದು , 5 ಸಾವಿರ ಕೆಲಸಗಾರರಿದ್ದಾರೆ.
ಅವರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಅವರಿಗೆ ಅನುಕೂಲ ಆಗುವಂತೆ ಕಾರ್ಯಯೋಜನೆ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಸಮವಸ್ತ್ರವಾಗಿ ಖಾದಿಬಟ್ಟೆಯನ್ನೇ ಪೂರೈಸಬೇಕು
ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಖಾದಿ ಕಡ್ಡಾಯಗೊಳಿಸಬೇಕು.
ರಾಜ್ಯದಲ್ಲಿ ಸರಕಾರಿ ನೌಕರರಿಗೆ ವಾರದಲ್ಲಿ 1 ಬಾರಿಯಾದರೂ ಸಮವಸ್ತ್ರವನ್ನು ಕಡ್ಡಾಯಗೊಳಿಸಬೇಕು. ಸರಕಾರದ ವಿವಿಧ ನಿಗಮಗಳಲ್ಲಿ ಸೇವೆಗೈಯುತ್ತಿರುವ ನೌಕರರಿಗೆ ಖಾದಿ ಸಮವಸ್ತ್ರ ಕಡ್ಡಾಯಗೊಳಿಸುವುದರಿಂದ ಖಾದಿ ಉದ್ಯಮ ಪುನಶ್ಚೇತನಗೊಳಿಸಲು ಬಹಳಷ್ಟು ಅನುಕೂಲ ಆಗುತ್ತದೆ ಎಂದು ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಖಾದಿ ಸಂಘದ ಸದಸ್ಯರು ಉಪಸ್ಥಿತರಿದ್ದರು.