*ಕಾಂಗ್ರೆಸ್ ಚುನಾವಣಾ ಖರ್ಚಿನ ಹಣ ಗುತ್ತಿಗೆದಾರರ ಮನೆಯಲ್ಲಿ ಪತ್ತೆ ಯಾಗಿರೋದು ಎಟಿಎಂ ಸರ್ಕಾರದ ಕೊಡುಗೆ : ಸಿಎಂಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು*
ಬೆಂಗಳೂರು ಪ್ರಜಾಕಿರಣ.ಕಾಮ್ : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕಳ್ಳ ಯಾವತ್ತೂ ತಾನೇ ಕಳ್ಳ ಎಂದು ಒಪ್ಪಿಕೊಳ್ಳುವುದಿಲ್ಲ – ಹೀಗೆ ನೇರವಾಗಿ ಸಿಎಂಗೆ ಟ್ವೀಟ್ ಮಾಡಿ ಟಕ್ಕರ್ ಕೊಟ್ಟಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
ಐಟಿ ದಾಳಿಯ ಹಿನ್ನಲೆಯಲ್ಲಿ ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡಿ ಟ್ವೀಟ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಪ್ರಲ್ಹಾದ ಜೋಶಿ, “ಕನ್ನಡಿಗರಿಗೆ ದ್ರೋಹ ಬಗೆದ ನೀವು ಅಭಿವೃದ್ಧಿಗೆ ತಿಲಾಂಜಲಿ ಇಟ್ಟಿದ್ದೀರಿ.
ನಿಮ್ಮ ಮೈತ್ರಿಕೂಟದ ಪಕ್ಷದ ಚುನಾವಣೆಯ ಖರ್ಚು ವೆಚ್ಚ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಸರಕಾರದ ಮೇಲೆ ಬಿದ್ದಿದೆ.
ಅದಕ್ಕೆ ಗುತ್ತಿಗೆದಾರರ ಮನೆಯಲ್ಲಿ ನೋಟಿನ ಕಂತೆ ಪತ್ತೆಯಾಗಿದೆ. ನಾಡಿನ ಅಭಿವೃದ್ಧಿಗೆ ಇಲ್ಲದ ಹಣ ನಿಮ್ಮವರ ಮನೆಯಲ್ಲಿ ಪತ್ತೆಯಾಗುತ್ತಿದೆ ಎಂದರೆ “ಕಲೆಕ್ಷನ್” ಜೋರಾಗಿ ನಡೆಯುತ್ತಿರುವುದು ಸ್ಪಷ್ಟ ಎಂದು ಪ್ರಲ್ಹಾದ ಜೋಶಿಯವರು ನೇರ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಸರ್ಕಾರ ಎಂದು ಟೀಕಿಸಿರುವ ಕೇಂದ್ರ ಸಚಿವರು, ಇಂತಹ ಅಪರಿಮಿತ ಭ್ರಷ್ಟಾಚಾರದ ಕಾರಣಕ್ಕೇ ನಿಮ್ಮ ಸರಕಾರಕ್ಕೆ #ATMSarkara ಎಂಬ ಹಣೆಪಟ್ಟಿ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.