ಬೆಂಗಳೂರು prajakiran.com : ಶನಿವಾರವೂ ರಾಜ್ಯದಲ್ಲಿ ಒಂದೇ ದಿನ 141 ಹೊಸ ಕರೋನಾ ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2922ಕ್ಕೆ ಬಂದು ನಿಂತಿದೆ.
ಸೋಂಕಿತೆ ಪಿ-2783 47 ವರ್ಷದ ಬೀದರನ ಮಹಿಳೆ ವಿವಿಧ ಕಾಯಿಲೆಗಳಿಂದ ಬಳಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆ ಮೂಲಕ ಇಂದು ಸಾವನ್ನಪ್ಪಿದವರ ಸಂಖ್ಯೆ ಕೂಡ 49ಕ್ಕೆ ಹೆಚ್ಚಳವಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿಗೆ ಶನಿವಾರ ಕರೋನಾ ಬಿಗ್ ಶಾಕ್ ನೀಡಿದ್ದು, 2 ವರ್ಷದ ಹೆಣ್ಣು ಮಗು, 8 ಹಾಗೂ11 ವರ್ಷದ ಬಾಲಕ ಸೇರಿ ಒಟ್ಟು 33 ಜನರಿಗೆ ಪ್ರಕರಣಗಳು ಪತ್ತೆಯಾಗಿರುವುದು ಆಘಾತ ತಂದಿದೆ.
ಈ ಪೈಕಿ 18 ಜನರಿಗೆ ಯಾವ ರೀತಿ ಸೋಂಕು ಬಂದಿದೆ ಎಂಬುದೇ ಗೊತ್ತಾಗದಿರುವುದು ಆರೋಗ್ಯ ಇಲಾಖೆಗೆ ಬಹು ದೊಡ್ಡ ಸವಾಲಾಗಿದೆ.
ಬೆಂಗಳೂರಿನಲ್ಲಿಯೇ ಒಂದೇ ದಿನ 33 ಕರೋನಾ ಪ್ರಕರಣ ಪತ್ತೆಯಾಗಿರುವುದು ರಾಜ್ಯದ ರಾಜಧಾನಿ ಜನತೆಗೆ ಆತಂಕ ತಂದಿದೆ.
141 ಜನರ ಪೈಕಿ 91 ಹೊರ ರಾಜ್ಯದಿಂದ ಅದರಲ್ಲಿ 83 ಕೇಸ್ ಗಳು ಮಹಾರಾಷ್ಟ್ರದಿಂದಲೇ ಬಂದಿವೆ.
ಇನ್ನುಳಿದ 50 ಜನ ರಾಜ್ಯದ ಒಳಗೆ ಓಡಾಡಿದವರು, ಸೋಂಕಿತರ ಸಂಪರ್ಕ ಹೊಂದಿದವರಾಗಿದ್ದಾರೆ.
ಯಾದಗಿರಿಯಲ್ಲಿ 18, ದಕ್ಷಿಣ ಕನ್ನಡ 14, ಹಾಸನ 13, ಉಡುಪಿ 13, ವಿಜಯಪುರ 11, ಬೀದರ 10, ಶಿವಮೊಗ್ಗ 6, ದಾವಣಗೆರೆ 4 , ಹಾವೇರಿ 4, ಕೋಲಾರ 3, ಮೈಸೂರು 2, ಕಲಬರುಗಿ 2, ಧಾರವಾಡ 2, ಉತ್ತರಕನ್ನಡ 2, ಬೆಳಗಾವಿ, ಚಿತ್ರದುರ್ಗ, ತುಮಕೂರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ.