ಧಾರವಾಡ prajakiran.com : ಧಾರವಾಡ ತಾಲೂಕಿನ ಅಮ್ಮಿನಭಾವಿಯ ಗ್ರಾಮದ ಹದ್ದೆಯಲ್ಲಿರುವ ಮೇ: ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್ದಲ್ಲಿ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ ಸ್ಪೋಟಕ ವಸ್ತುಗಳನ್ನು ದಾಳಿಮಾಡಿ ವಶಪಡಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ತಿಳಿಸಿದ್ದಾರೆ.
ಅವರು ಬುಧವಾರ ಸಂಜೆ ಎಸ್.ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮಾರ್ಚ್ 15ರ ಸಂಜೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ಗಳಾದ ವಿಜಯಕುಮಾರ ಬಿರಾದಾರ ಮತ್ತು ಶ್ರೀಧರ ವಿ ಸತಾರೇ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಅಮ್ಮಿನಭಾವಿ ಗ್ರಾಮದ ಹದ್ದೆಯಲ್ಲಿರುವ ಮೇ: ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್ ಮೇಲೆ ದಾಳಿ ಮಾಡಿದ್ದಾರೆ.
ಯಾವುದೇ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ 9 ರಟ್ಟಿನ ಬಾಾಕ್ಸ್ ನಲ್ಲಿ ಇದ್ದ ರೂ. 16,500/- ಮೌಲ್ಯದ 1650 ಜಿಲಟಿನ್ ಕಡ್ಡಿಗಳನ್ನು ಮತ್ತು ಕಟ್ಟಿಗೆ ಬಾಕ್ಸ್ನಲ್ಲಿದ್ದ ರೂ.3,500/- ಮೌಲ್ಯದ 700 ಎಲೆಕ್ಟ್ರಾನಿಕ್ ಡಿಟೋನೇಟರ್ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಸದರಿ ಪ್ರಕರಣವನ್ನು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಲಂ 9(ಬಿ)(1)(ಬಿ) ಹಾಗೂ ಸಹ ಕಲಂ 5 ಎಕ್ಸಪ್ಲೋಜಿವ್ಹ ಆ್ಯಕ್ಟ್ 1884ರ ಪ್ರಕಾರ ದಾಖಲಿಸಲಾಗಿದೆ.
ಮೇ: ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್ ಮಾಲಿಕ ಧಾರವಾಡದ ದಯಾನಂದ ಬಸವರಾಜ ಮಾಸೂರ, ಕ್ರಷ್ಣ ಕಾರಕೂನ ಆಗಿರುವ ಕರಡಿಗುಡ್ಡ ಗ್ರಾಮದ ಶಂಕರಗೌಡ ಶಿವನಗೌಡ ಗೌಡ್ರ ಹಾಗೂ ಇವರಿಗೆ ಅನಧಿಕೃತವಾಗಿ ಸ್ಪೋಟಕ ವಸ್ತುಗಳನ್ನು ಪೂರೈಸಿದ್ದ ಬಾಗಲಕೋಟೆಯ ನವೀನಕುಮಾರ ಎ. ವಾಲಿ ಅವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.
ಆರೋಪಿ ಶಂಕರಗೌಡ ಶಿವನಗೌಡ ಗೌಡ್ರನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದೆಂದು ತಿಳಿಸಿದರು.
ಧಾರವಾಡ ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಎಂ.ಬಿ.ಸಂಕದ ಮಾರ್ಗದರ್ಶನ ಮತ್ತು ಪೊಲೀಸ್ ಇನ್ಸಪೆಕ್ಟರ್ಗಳಾದ ವಿಜಯಕುಮಾರ ಬಿರಾದಾರ ಮತ್ತು ಶ್ರೀಧರ ವಿ ಸತಾರೇ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರುದ್ರಪ್ಪ ಮರಡಿ, ಎನ್.ಬಿ.ಕಂಬೋಗಿ, ಶರೀಪ್ ಎಂ. ಹಗೇದ, ಎಚ್.ಬಿ.ಐಹೋಳೆ, ರಮೇಶ ಕಟ್ಟಿ ಹಾಗೂ ಅಬ್ದುಲ್ ಕಾಕರ ಅವರು ಸ್ಪೋಟಕ ವಸ್ತುಗಳ ಪತ್ತೆ ಮತ್ತು ವಶಕ್ಕೆ ಪಡೆಯುವ ದಾಳಿಯಲ್ಲಿ ಭಾಗವಹಿಸಿದ್ದರು.
ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿರುವ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.