ಹುಬ್ಬಳ್ಳಿ prajakiran.com : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲುದಾರಿಕೆಯ ವಿಭವ ಇಂಡಸ್ಟ್ರೀಸ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಪರಿಣಾಮ ಅಂದಾಜು ಒಟ್ಟು 4.5 ಕೋಟಿ ನಷ್ಟ ಆಗಿದೆ ಎಂದು ನಿರ್ದೇಶಕ ಎಚ್.ಎನ್. ನಂದಕುಮಾರ ತಿಳಿಸಿದ್ದಾರೆ.
ಕಾರ್ಖಾನೆಯ ಉತ್ಪಾದನಾ ವಿಭಾಗದಲ್ಲಿ ಕಾಣಿಸಿಕೊಂಡ ಶಾಟ್ ಸರ್ಕ್ಯೂಟ್ ನ ಬೆಂಕಿ ಕೆನ್ನಾಲಿಗೆ ಪೊರಕೆ ತಯಾರಿಕಾ ಘಟಕದ ವರೆಗೆ ವಿಸ್ತರಿಸಿದೆ.
ಇದರಿಂದಾಗಿ ಸುಮಾರು 8 ಟ್ರಕ್ ಪೊರಕೆ ಹುಲ್ಲು ಸುಟ್ಟು ಕರಕಲಾಗಿದೆ. ಜೊತೆಗೆ ಕೆಮಿಕಲ್ಸ್, ಪರಪ್ಯೂಮ್, ಹೈಡ್ರೋಕಾರ್ಬನ್, ಫಿನೈಲ್ ಸೇರಿದಂತೆ ಅನೇಕ ವಸ್ತುಗಳುಬೆಂಕಿಗೆ ಆಹುತಿಯಾಗಿವೆ ಎಂದು ವಿವರಿಸಿದರು.
ಕರೋನಾ ಹಿನ್ನಲೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದ ಪರಿಣಾಮ ಉತ್ಪಾದನೆ ಹೆಚ್ಚಳಗೊಂಡಿತ್ತು. ಹೀಗಾಗಿ ದಾಸ್ತಾನು ಮಾಡಲಾಗಿದ್ದ ಬಹುತೇಕ ವಸ್ತುಗಳು ಹಾನಿಗೀಡಾಗಿವೆ ಎಂದರು.
ಕಾರ್ಖಾನೆಯಲ್ಲಿ ಫೈರ್ ಫೈಟರ್ ಇದ್ದರು. ಸಕಾಲಕ್ಕೆ ಬಂದ 25ಕ್ಕೂ ಹೆಚ್ಚು ಅಗ್ನಿಶಾಮಕದಳದ ಸಿಬ್ಬಂದಿ ಬೆಳಗಿನ ಜಾವದವರೆಗೆ ಬೆಂಕಿ ನಂದಿಸಲು ಶ್ರಮಿಸಿದರು ಎಂದು ಹೇಳಿದರು.
ಸೂಕ್ತ ತನಿಖೆಗೆ ಸೂಚನೆ ನೀಡಿದ ಜೋಶಿ :
ವಿಭವ ಇಂಡ್ರಸ್ಟ್ರೀಸ್ ನಲ್ಲಿ ಅಗ್ನಿಅವಘಡ ಸಂಭವಿಸಿದ ಕುರಿತು ಸೂಕ್ತ ತನಿಖೆ ನಡೆಸಲು ಪೊಲೀಸರಿಗೆ ಹಾಗೂ ಅಗ್ನಿ ಶಾಮಕದಳದವರಿಗೆ ಮತ್ತು ಹೆಸ್ಕಾಂಗೆ ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಅವರು ಮಂಗಳವಾರ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಘಟನೆ ಕುರಿತು ಹೆಸ್ಕಾಂ ಆಗಲಿ, ಯಾರ ಮೇಲಾಗಲಿ ನಮ್ಮ ದೂರು ಇಲ್ಲ. ಹೆಸ್ಕಾಂ ಈ ಕುರಿತು ಸರಿಯಾಗಿ ತನಿಖೆ ನಡೆಸಿ ವರದಿ ನೀಡಬೇಕು ಎಂದು ತಿಳಿಸಲಾಗಿದೆ ಎಂದರು.
ತನಿಖೆ ಹಾಗೂ ಪಂಚನಾಮೆ ಪೂರ್ಣಗೊಂಡನಂತರ ಆದಷ್ಟು ಬೇಗ ಕಾರ್ಖಾನೆ ಆರಂಭಿಸಲಾಗುವುದು ಎಂದು ಸಚಿವ ಜೋಶಿ ತಿಳಿಸಿದರು.