ಬಡ್ಡಿಗೆ ಚಕ್ರ ಬಡ್ಡಿಸೇರಿಸಿ ಮೊತ್ತ ದ್ವಿಗುಣ ಆರೋಪ
ಹಲವು ವರ್ಷ ನೀರಿನ ಬಿಲ್ ನೀಡಿಯೇ ಇಲ್ಲ
ಈಗ ಏಕಾಏಕಿ ವಸೂಲಿಗೆ ಖಾಸಗಿ ಕಂಪನಿಗೆ ನೀಡಿರುವುದು ಸರಿಯಲ್ಲ
ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೀರಿನ ಕರ ಬಾಕಿ ಮನ್ನಾಕ್ಕೆ ಒತ್ತಾಯಿಸಿ ಫೆ. 28ರಂದು ರವಿವಾರ ನಗರದ ಕಲಾಭವನದಿಂದ ಶಾಸಕರ ಮನೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಹಾನಗರ ಪಾಲಿಕೆ ನೀರಿನ ಕರಕ್ಕೆ ಬಡ್ಡಿಗೆ ಚಕ್ರ ಬಡ್ಡಿಸೇರಿಸಿ ಮೊತ್ತ ದ್ವಿಗುಣಗೊಳಿಸಿದೆ.
ಅಲ್ಲದೆ, ಹಲವು ವರ್ಷಗಳ ಕಾಲ ನೀರಿನ ಬಿಲ್ ನೀಡಿಯೇ ಇಲ್ಲ. ಈಗ ಏಕಾಏಕಿ ವಸೂಲಿಗೆ ಎಲ್ ಆಂಡ್ ಟಿ ಖಾಸಗಿ ಕಂಪನಿಗೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2015ರಲ್ಲಿ 30ರಿಂದ 35 ಕೋಟಿ ಇದ್ದ ನೀರಿನ ಕರ ಬಾಕಿ ಈಗ 205 ಕೋಟಿಗೆ ಬಂದಿದೆ. ಅದನ್ನು ನೋಡಿದರೆ ಬಡ್ಡಿಗೆ ಬಡ್ಡಿ, ಚಕ್ರಬಡ್ಡಿ ಸೇರಿಸಿ ಮೀಟರ್ ಬಡ್ಡಿ ಮಾಡಿದ್ದಾರೆ. ನೀರಿನ ಕರ ಬಾಕಿ ಉಳಿಯಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳೇ ಹೊಣೆ.
ಇವರು ಈವರೆಗೆ ಪ್ರತಿ ತಿಂಗಳು ಸಮರ್ಪಕ ಬಿಲ್ ನೀಡಿಯೇ ಇಲ್ಲ. ಕೇವಲ ಆರು ವರ್ಷಕ್ಕೆ ಬಡ್ಡಿಗೆ ಬಡ್ಡಿ ಚಕ್ರಬಡ್ಡಿ ಸೇರಿ ಅಸಲೂ ಮೊತ್ತ ದ್ವಿಗುಣಗೊಂಡಿದೆ. ತಿಂಗಳಿಗೆ ನಾಲ್ಕು ಬಾರಿ ಸರಬರಾಜು ಮಾಡಲಾಗುತ್ತಿತ್ತು.
ಈಗ ಆರು ಬಾರಿ ಸರಬರಾಜು ಆಗಿರಬಹುದು. ಆದರೆ ಕೋವಿಡ್ ಹಿನ್ನಲೆಯಲ್ಲಿ ಜನತೆ ಸಂಕಷ್ಟದಲ್ಲಿದೆ. ಗಾಯದ ಮೇಲೆ ಬರೆ ಎಳೆಯುವುದು ಸರಿಯಲ್ಲ. ಹೀಗಾಗಿ ಸಂಪೂರ್ಣ ನೀರಿನ ಕರ ಬಾಕಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ 1 ಲಕ್ಷ 41 ಸಾವಿರ ನೀರಿನ ಕನೆಕ್ಷನ್ ಕರ ಬಾಕಿ ವಸೂಲಿಗಾಗಿ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿರುವುದು ಸರಿಯಾದ ಬೆಳವಣಿಗೆ ಅಲ್ಲ. ಬೇಕಿದ್ದರೆ ಮೊದಲಿಗೆ ಮೂಲ ಸಾಲ ಮನ್ನಾ ಮಾಡಿ, ಆನಂತರ ವಹಿಸಲಿ ಎಂದರು.
ಹೀಗಾಗಿ ಮೊದಲ ಹಂತವಾಗಿ ಫೆ. 28ರಂದು ರವಿವಾರ ಧಾರವಾಡದ ಕಲಾಭವನದಿಂದ ಶಾಸಕ ಮನೆಗೆ ಮುತ್ತಿಗೆ ಹಾಕಲಾಗುವುದು. ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರ ಯಾವ ಮನೆಗೆ ಮುತ್ತಿಗೆ ಹಾಕಬೇಕು ಎಂಬುದು ತಿಳಿಯುತ್ತಿಲ್ಲ.
ಅವರು ಹುಬ್ಬಳ್ಳಿಯಲ್ಲಿ ಇರ್ತಾರ, ಬೆಂಗಳೂರು ಅಥವಾ ಧಾರವಾಡದಲ್ಲಿ ಇರತ್ತಾರ ಗೊತ್ತಿಲ್ಲ. ಅವರು ಎಲ್ಲಿ ಇರ್ತಾರೆ ಎಂಬುದನ್ನು ನೋಡಿಕೊಂಡು ಮುತ್ತಿಗೆ ಹಾಕಲಾಗುವುದು. ಅದೇ ರೀತಿ ಜಿಲ್ಲಾಉಸ್ತುವಾರಿ ಸಚಿವ ಜಗದೀಶಶೆಟ್ಟರ್ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಬಗ್ಗೆ ಹುಬ್ಬಳ್ಳಿ-ಧಾರವಾಡದಲ್ಲಿ ವಾರ್ಡ್ ವಾರು ಜನರಿಗೆ ತಿಳುವಳಿಕೆ ನೀಡಿ ಗಾಂಧಿ ಮಾರ್ಗದಲ್ಲಿ ಚಳುವಳಿ ನಡೆಸಲಾಗುವುದು. ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳ ನಿರಂತರ ಹೋರಾಟ ನಡೆಸಲಾಗುವುದು.
ಇದರಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಭಾಗವಹಿಸಲಿದ್ದಾರೆ. ಸಂಪೂರ್ಣ ಮನ್ನಾ ಆಗುವರೆಗೆ ಹೋರಾಟ ನಡೆಸಲಾಗುವುದು.
ಜನರಿಗಾಗಿ ಜನರಿಂದ ಹೋರಾಟ ನಡೆಯಲಿದೆ. ಹೀಗಾಗಿ ಜನತೆ ಪಕ್ಷಾತೀತವಾಗಿ ಬೆಂಬಲಲಿಸಬೇಕು ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಘು ಲಕ್ಕಣ್ಣವರ, ಯಾಶೀನ್ ಹಾವೇರಿಪೇಟ, ಧಾರವಾಡ ಎಪಿಎಂಸಿ ಮಾಜಿ ಅಧ್ಯಕ್ಷ ಮಹಾವೀರ ಜೈನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ ತುರಮುರಿ, ಕಾಂಗ್ರೆಸ್ ಮುಖಂಡರಾದ ರಫೀಕ್ ದರಗಾದ, ಬಸವರಾಜ ಕಿತ್ತೂರ, ಚನ್ನಬಸ್ಸು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.