ಧಾರವಾಡ prajakiran.com : ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ಉದ್ಯೋಗಿಗಳ ಸಾವಿನ ಪ್ರಕರಣವನ್ನು ಸಿ.ಓ.ಡಿ. ತನಿಖೆಗೆ ಒಪ್ಪಿಸುವಂತೆ ಜಯಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾಧ್ಯಕ್ಷ ಸುಧೀರ ಮುಧೋಳ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾಳೆ ಕೃಷಿ ವಿ.ವಿ. ಯ ಘಟಿಕೋತ್ಸವಕ್ಕೆ ಆಗಮಿಸುತ್ತಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.
ಈ ಕುರಿತು ಸಮಗ್ರ ತನಿಖೆಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದ್ದು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರುಗಳು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಸಂಘಟನೆ ಅವರ ಮನೆಯಿಂದ ಕೃಷಿ ವಿಶ್ವವಿದ್ಯಾಲಯದ ವರೆಗೆ ಪಾದಯಾತ್ರೆ ನಡೆಸಲಿದೆ ಎಂದು ಹೇಳಿದರು.
ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ ಬಳಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಮೇಘನಾ ಸಿಂಗನಾಥ ಹಾಗೂ ರೇಖಾ ಕೊಕಟನೂರ ಮೃತ ಪಟ್ಟಿದ್ದು, ಇವರ ಸಾವಿನ ಹಿಂದೆ ಅನುಮಾನವಿದ್ದು, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ. ಚಟ್ಟಿ ಅವರ ಆಪ್ತ ಕಾರ್ಯದರ್ಶಿ ಎಂ.ಎ. ಮುಲ್ಲಾ ಇವರಿಬ್ಬರನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದ.
ಮಹಿಳಾ ಉದ್ಯೋಗಿಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೆಲಸದ ನೆಪ ಹೇಳಿ ದುರುಪಯೋಗಪಡಿಸಿಕೊಂಡು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು ಏಕೆ.
ಈ ಮನಸೂರ ಆಹ್ಮದ ಮುಲ್ಲಾ ತಮ್ಮ ಕಾರಿನಲ್ಲಿ ಹೆದರಿಸಿ , ಬೆದರಿಸಿ , ಬ್ಲಾಕ್ ಮೇಲ್ ಮಾಡಿ ಕರೆದುಕೊಂಡು ಹೋಗಿರುವ ಸಂಶಯವಿದೆ ಎಂದು ಆರೋಪಿಸಿದರು.
ಅಪಘಾತದಲ್ಲಿ ಮೃತಪಟ್ಟ ಈ ಹೆಣ್ಣು ಮಕ್ಕಳು ತಮ್ಮ ತಂದೆ ತಾಯಂದಿರಿಗೆ ಬಾಗಲಕೋಟೆಗೆ ಹೋಗುತ್ತೇವೆ ಎಂದು ಹೇಳಿದ್ದರು .
ಆದರೆ ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಮಾಸ್ತಿಕಟ್ಟೆ ಬಳಿ ನಡೆದ ಅಪಘಾತದಲ್ಲಿ ಇವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆಗೆ ಹೋಗುವವರು ಅಂಕೋಲಾದ ಕಡೆಗೆ ಹೋಗಿದ್ದು ಏಕೆ ? ಎಂಬುದು ಸಂಶಯ ಮೂಡಿಸಿದೆ ಎಂದರು.
ಅಪಘಾತವಾದ ದಿನ ಕೃಷಿ ವಿ.ವಿ. ಕುಲಪತಿ ಎಂ.ಬಿ. ಚಟ್ಟಿ ದೆಹಲಿಯಿಂದ ಗೋವಾಕ್ಕೆ ಬಂದಿರುವ ಶಂಕೆ ಇದೆ . ಇದು ಸಿ.ಬಿ.ಐ ಅಥವಾ ಸಿ.ಓ.ಡಿ. ತನಿಖೆಯಿಂದ ಮಾತ್ರ ಬಹಿರಂಗವಾಗಬೇಕಾಗಿದೆ ಎಂದರು.
ಈ ಪ್ರಕರಣದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಇಬ್ಬರು ಯುವತಿಯರಿಗೆ ಹೆದರಿಸಿ , ಬೆದರಿಸಿರುವ ವಾಟ್ಸಪ್ ಚಾಟ್ ಇದೆ. ಹೆಣ್ಣು ಮಕ್ಕಳಿಗೆ ಇಲ್ಲಿ ಭದ್ರತೆ ಇಲ್ಲ ಹಾಗೂ ದೈಹಿಕ ಹಾಗೂ ಮಾನಸಿಕ ಹಿಂಸೆಗಳು ಸಂಭವಿಸುತ್ತಲೇ ಇರುವ ಬಗ್ಗೆ ನಮಗೆ ನಮ್ಮ ಸಂಘಟನೆಗೆ ವಿಶ್ವವಿದ್ಯಾಲಯದ ಆನೇಕ ಗುತ್ತಿಗೆ ನೌಕರರು ಹಾಗೂ ಕೆಲವು ಸಿಬ್ಬಂದಿಗಳು ದೂರವಾಣಿಯ ಮುಖಾಂತರ ತಿಳಿಸುತ್ತಲೇ ಬಂದಿದ್ದಾರೆ ಎಂದರು.
ಹೀಗಾಗಿ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿ ಓ ಡಿಗೆ ನೀಡಲಬೇಕು ಎಂದು ಸಂಘಟನೆ ಗೌರವಅಧ್ಯಕ್ಷ ಲಕ್ಷ್ಮಣ ದೊಡ್ಡಮನಿ, ಜಿಲ್ಲಾಧ್ಯಕ್ಷ ಸುಧೀರ ಮುಧೋಳ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಚಂದ್ರು ಅಂಗಡಿ, ಮಂಜು ಸುತಗಟ್ಟಿ, ಅಲ್ತಾಫ ಜಾಲೇಗಾರ, ಸಿದ್ದಪ್ಪ ಹೆಗಡೆ, ಕರಿಯಪ್ಪ ಮಾಳಗಿಮನಿ, ಪರುಶುರಾಮ ದೊಡ್ಡಮನಿ ಉಪಸ್ಥಿತರಿದ್ದರು.