ನವಲಗುಂದ prajakiran.com : ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದ ನವಲಗುಂದ ತಾಲೂಕಿನ ಶಿರೂರು ಸಂಪರ್ಕಿಸುವ ಹಾರೋಬೆಳವಡಿ ಹತ್ತಿರ ಇರುವ ತುಪ್ಪರಿಹಳ್ಳ ಸೇತುವೆಗೆ ಪ್ರವಾಹ ಬಂದಿರುವುದರಿಂದ ೫ ದಿನ ಗ್ರಾಮಕ್ಕೆ ಸಂಪರ್ಕವೇ ಇರಲಿಲ್ಲ.
ಇದರಿಂದಾಗಿ ಶಿರೂರ, ಆಯಟ್ಟಿ, ಬ್ಯಾಲ್ಯಾಳ, ಹಣಸಿ, ಶಿರಕೋಳ, ಬಳ್ಳೂರ, ಅಳಗವಾಡಿ, ಹಾಳಕುಸುಗಲ್ಲ ಹಾಗೂ ಶಾನವಾಡ ಗ್ರಾಮಗಳ ಮುಂಗಾರು ಬೆಳೆ ಹಾಳಾಗಿವೆ.ಹೀಗಾಗಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಒತ್ತಾಯಿಸಿದ್ದಾರೆ.
೧ ವರ್ಷ ಕಳೆದರೂ ಸೇತೆವೆ ದುರಸ್ಥಿ ಕಾರ್ಯ ಗುತ್ತಿಗೆದಾರರು ಪೂರ್ಣಗೊಳಿಸಿಲ್ಲ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದರು.
ಕೇವಲ ಅಧಿಕಾರಿಗಳು ಭೇಟಿ ಮಾಡಿ ನೂಡಲ ಅಧಿಕಾರಿಗಳನ್ನು ನೇಮಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರೈತರಿಗೆ ಪರಿಹಾರ ಸಿಗುವ ರೀತಿಯಲ್ಲಿ ಸರ್ಕಾರ ಮುಂದಾಗಬೇಕು. ಶಿರೂರ ಹಾಗೂ ಆಹೆಟ್ಟಿ ಗ್ರಾಮಗಳಲ್ಲಿ ಅಂದಾಜು ೧. ಲಕ್ಷ ಪೇರಲಗಿಡಗಳಿವೆ. ಇಲ್ಲಿಯವರೆಗೆ ಬೆಳೆಹಾನಿಯ ಬಗ್ಗೆ ಸರ್ವೆ ಕಾರ್ಯ ಕೂಡಾ ನಡೆದಿಲ್ಲಎಂದು ಆರೋಪಿಸಿದರು.
ನಂತರ ಅವರು ಬೆಣ್ಣಿಹಳ್ಳ ಪ್ರವಾಹದಿಂದ ಹಾನಿಗೊಳಗಾದ ಪಡೆಸೂರ, ಯಮನೂರ. ಆರೇಕುರಹಟ್ಟಿ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಣೆಮಾಡಿದರು.
ಮಲಪ್ರಭಾದಿಂದ ನೀರು ಬಿಡಬೇಡಿ :
ಸವದತ್ತಿ ಹತ್ತಿರ ಇರುವ ಮಲಪ್ರಭಾ ಡ್ಯಾಂ (ರೇಣುಕಾ ಸಾಗರ) ಗರಿಷ್ಟ ೩೮ ಟಿ.ಎಂ.ಸಿ ಇದೆ ಇಂದಿನ ನೀರಿನ ಮಟ್ಟ ೨೭ ಟಿ.ಎಂ.ಸಿ ಇದೆ ಇನ್ನೂ ೧೧ ಟಿ.ಎಂ.ಸಿ ಜಲಾಶಯದಲ್ಲಿ ಸಂಗ್ರಹವಾಗಬೇಕಾಗಿದೆ. ಒಳ ಹರಿವು ಕೂಡಾ ಕಡಿಮೆಯಾಗಿರುವದರಿಂದ ಈಗಾಗಲೇ ಗೇಟ್ ಮೂಲಕ ನೀರು ಬಿಡುತ್ತಿರುವದು ಸರಿಯಲ್ಲ ಡ್ಯಾಂ ತುಂಬುವವರೆಗೂ ನೀರನ್ನು ಬಿಡಬಾರದೆಂದು ಒತ್ತಾಯಿಸಿದ್ದಾರೆ.
ಶಿರಕೋಳ-ಹಣಸಿ ನಡುವೆ ರಸ್ತೆ ಸಂಚಾರ ಮುಕ್ತ
ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಣಸಿ-ಶಿರಕೋಳ ನಡುವೆ ರಸ್ತೆ ಮಳೆಯಿಂದ ಕಿತ್ತುಹೋಗಿದ್ದು ರೈತರು ತಮ್ಮ ಜಮೀನುಗಳಿಗೆ ಹೋಗಲು ತೊಂದರೆಯಾಗಿದೆ ಎಂದು ಮನವಿ ಮಾಡಿದಾಗ ಜೆ.ಸಿ.ಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ತಮ್ಮ ಸ್ವಂತ ಹಣದಿಂದ ರಸ್ತೆ ಪೂರ್ಣಗೊಳಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.