ಧಾರವಾಡ prajakiran.com : ಕೋವಿಡ್ ಎರಡನೇಯ ಅಲೆ ತೀವ್ರಗತಿ ಪಡೆಯುವ ಮುನ್ನ ಸರಕಾರ ಮತ್ತು ಸಮುದಾಯ ಮುಂಜಾಗ್ರತೆವಹಿಸಬೇಕು ಎಂದು ಎಐಸಿಸಿ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಮನವಿ ಮಾಡಿದ್ದಾರೆ.
ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಈ ಹಿನ್ನೆಯಲ್ಲಿ ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಕೈಕೊಂಡಿದ್ದರೂ, ಸೋಂಕಿತ ಎಲ್ಲರಿಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದ ಪರಿಸ್ಥಿತಿ ನಿರ್ಮಾಣ ಆಗಿದೆ.
ಜಿಲ್ಲೆಯಲ್ಲಿನ ಜಿಲ್ಲಾ ಆಸ್ಪತ್ರೆ ಮತ್ತು ಕಿಮ್ಸ್ ಗೆ ಅಧಿಕ ಸಂಖ್ಯೆಯಲ್ಲಿ ಸೋಂಕಿತರು ದಾಖಲಾಗುತ್ತಿರುವುದರಿಂದ ಬೆಡ್, ವೆಂಟಿಲೆಟರ್, ಆಕ್ಸಿಜನ್ ಇನ್ನಿತರ ಸೌಲಭ್ಯಗಳು ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದಂತಾಗಿದೆ.
ಈ ಹಂತದಲ್ಲಿ ಜಿಲ್ಲಾ ಆಡಳಿತ ಶತಪ್ರಯತ್ನ ಮಾಡಿದರೂ ಪರಿಸ್ಥಿತಿ ಕೈಮೀರುತ್ತಿದೆ.
ಆದ್ದರಿಂದ ಜಿಲ್ಲಾ ಆಡಳಿತ ಅವಳಿನಗರದಲ್ಲಿನ ಕಲ್ಯಾಣ ಮಂಟಪ ಮತ್ತು ಕೃಷಿ ವಿಶ್ವವಿದ್ಯಾಲಯದ ಕಟ್ಟಡಗಳನ್ನು ಬಳಸಿಕೊಳ್ಳಲು ಮುಂದಾಗಬೇಕು.
ಈ ಮೂಲಕ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಅಪಾಯ ಎದುರಿಸಲು ಸನ್ನದ್ಧವಾಗಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಶೀಘ್ರ ಗತಿಯಲ್ಲಿ ಪಸರಿಸುತ್ತಿರುವ ಕೋವಿಡ್ ನಿಗ್ರಹದಲ್ಲಿ ಜನರು ಕೂಡ ಜಾಗೃತರಾಗಬೇಕು.
ಅನಗತ್ಯವಾಗಿ ತಿರುಗಾಡುವ ಪ್ರವೃತ್ತಿಯನ್ನು ಬಿಡಬೇಕು. ಮನೆಯಲ್ಲಿ ಸುರಕ್ಷಿತವಾಗಿರಬೇಕು.
ಹೊರಗಡೆ ಹೋದ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು , ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮುಖಾಂತರ ಮುನ್ನೆಚ್ಚರಿಕೆ ವಹಿಸಬೇಕು.
ಮುಂದಿನ ದಿನಗಳಲ್ಲಿ ಎದುರಾಗುವ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕು.
ಹುಬ್ಬಳ್ಳಿ-ಧಾರವಾಡ ಅವಳಿನಗರವು ರಾಜಧಾನಿ ಬೆಂಗಳೂರನಂತೆ ಆಗುವ ಮುನ್ನ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಬೇಕು ಎಂದು ಜಿಲ್ಲಾಡಳಿತ ಮತ್ತು ಜನರಲ್ಲಿ ಮನವಿ ಮಾಡಿದ್ದಾರೆ.
ಅವಳಿನಗರದ ಜನತೆಗೆ ತುರ್ತು ಸಹಾಯ ಅವಶ್ಯವಿದ್ದಲ್ಲಿ
ಮೊ.ನಂ.9844553713 ಅಥವಾ 9945142737 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.