ಕೋಲಾರ prajakiran.com : ಬೆಸ್ಕಾಂ ಕಚೇರಿ ಮುಂದೆ ಭಾನುವಾರ ಕೋಲಾರತಾಲೂಕಿನ ನರಸಾಪುರ ಗ್ರಾಮಸ್ಥರು ವಿಭಿನ್ನ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಎಡಿ ಕಾಲನಿ ಜನರಿಂದ ಸರ್ಕಾರಿ ಸೊಸೈಟಿ ನಿರ್ದೇಶಕ ಕೆಇಬಿ ಚಂದ್ರು ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ.
ಭಾನುವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಹೆಚ್ಚು ವೋಲ್ಟೇಜ್ ವಿದ್ಯುತ್ ನೀಡಿದ್ದರಿಂದ ನರಸಾಪುರದ ಗ್ರಾಮದ ಎಡಿ ಕಾಲನಿಯಅನೇಕ ಮನೆಗಳಲ್ಲಿದ್ದ ಟಿವಿ, ವಾಶಿಂಗ್ ಮಿಶನ್, ಮಿಕ್ಸಿ, ರೆಫ್ರಿಜಿರೇಟರ್ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ ಎಂದು ಸುಟ್ಟು ಹೋದ ವಸ್ತುಗಳನ್ನು ಇಟ್ಟು ತಮ್ಮಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಮಾತನಾಡಿದ ಸಾರ್ವಜನಿಕರು ಬೆಸ್ಕಾಂ ಅಧಿಕಾರಿ ಗುರಪ್ಪಅವರನ್ನ ಕೂಡಲೇ ವರ್ಗಾವಣೆ ಮಾಡಬೇಕು. ಜೊತೆಗೆ ನಮಗೆ ಆಗಿರುವ ನಷ್ಟಕ್ಕೆ ಹೊಸ ವಸ್ತುಗಳನ್ನ ಕೊಡಬೇಕೆಂದು ಆಗ್ರಹಿಸಿದರು.
ಬೆಸ್ಕಾಂ ಕಚೇರಿಯಲ್ಲಿ ಅನೇಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೆಸ್ಕಾಂ ಅಧಿಕಾರಿಗಳ ವಿರುದ್ದ ಧಿಕ್ಕಾರ ಹಾಕಿದರು.
ಇದೇ ವೇಳೆ ನರಸಾಪುರ ಗ್ರಾಮದ ರಸ್ತೆಯಲ್ಲಿರುವ ವಿದ್ಯುತ್ ಸ್ಥಂಭ ತೆರವುಗೊಳಿಸಿ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈ ಪ್ರತಿಭಟನೆಯಲ್ಲಿ ಕನ್ನಡ ಸೇನೆಯ ಕೋಲಾರ ತಾಲೂಕಿನ ಅಧ್ಯಕ್ಷ ಶಿವ ಚಂದ್ರಯ್ಯ, ಕನ್ನಡ ಸೇನೆಯ ಕೋಲಾರ ನಗರ ಘಟಕದ ಅಧ್ಯಕ್ಷ ಶ್ರೀಧರ್. ಕನ್ನಡ ಸೇನೆಯ ತಾಲೂಕು ಕಾರ್ಯದರ್ಶಿ ಜಾಲಿ ಶ್ರೀನಿವಾಸ ಹಾಗೂ ನರಸಾಪುರ ಗ್ರಾಮಸ್ಥರು ಭಾಗಿಯಾಗಿದ್ದರು.