ಧಾರವಾಡ prajakiran.com : ಕಳೆದ ಹದಿನೈದು ದಿನಗಳಿಂದ ಧಾರವಾಡದ ಮುರುಘಾಮಠ, ಹೆಬ್ಬಳ್ಳಿ ಅಗಸಿ ಹಾಗೂ ಮದಿಹಾಳದ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದ ಮಂಗವನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಮದವೇರಿದ ಮಂಗನ ಹಾವಳಿಗೆ ಧಾರವಾಡದ ವಿವಿಧ ಬಡಾವಣೆಗಳ ಜನರಲ್ಲಿ ಆತಂಕ ಹೆಚ್ಚಿಸಿತ್ತು. ಇನ್ನೂ ಸಿಕ್ಕ ಸಿಕ್ಕವರಿಗೆ ಕಚ್ಚಿದ್ದರಿಂದ ಸಾರ್ವಜನಿಕರಿಗೆ ಭಾರೀ ಆತಂಕ ಎದುರಾಗಿತ್ತು.
ಹೀಗಾಗಿ ಭಯ ಹುಟ್ಟಿಸಿದ ಮಂಗನನ್ನು ಸೆರೆ ಹಿಡಿಯವಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ಮೊರೆ ಹೋಗಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ, ಮಂಗಕ್ಕೆ ಬಲೆ ಹಾಕಿ ಕೊನೆಗೂ ಹರ ಸಾಹಸ ಪಟ್ಟು ಬಂಧಿಸಿದರು. ಆದರೆ ಬಲೆಯನ್ನೇ ಕತ್ತರಿಸಿ ಕೋತಿ ಪರಾರಿಯಾಗಿ ಅರಣ್ಯ ಸಿಬ್ಬಂದಿಗೆ ಚೆಳ್ಳೆಹಣ್ಣು ತಿನ್ನಿಸಿತ್ತು.
ಹೀಗಾಗಿ ಸತತ ಎರಡು ದಿನಗಳಿಂದ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆ ಮಾಡಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಚುಚ್ಚುಮದ್ದು ಬಳಸಿ ಮಂಗನನ್ನು ಹಿಡಿದಿದ್ದಾರೆ.
ಆ ಮೂಲಕ ಮಂಗನ ಹುಚ್ಚಾಟದಿಂದ ಕಂಗಲಾಗಿದ್ದ ವಿದ್ಯಾನಗರಿ ಧಾರವಾಡದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.