ಮಂಜುನಾಥ ಎಸ್. ರಾಠೋಡ
ಗದಗprajakiran.com : ಕೊರೊನಾ ಭೀತಿಯಿಂದಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳ ಮನೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
೨೦೨೦-೨೧ನೇ ಸಾಲಿಗೆ ಅಗತ್ಯವಿರುವ ಎಲ್ಲ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ೧ರಿಂದ ೧೦ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸುತ್ತಿದೆ.
ಗದಗ ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಪುಸ್ತಕಗಳು ಬಂದಿವೆ.
ಅದರಲ್ಲಿ ಈಗಾಗಲೇ ಎಲ್ಲ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡಲಾಗಿದ್ದು, ಆಯಾ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ತಮ್ಮ ಬೇಡಿಕೆಗೆ ಅನುಸಾರವಾಗಿ ಪುಸ್ತಕಗಳನ್ನು ಶಾಲೆಗಳಿಗೆ ಕೊಂಡೊಯ್ಯುತ್ತಿದ್ದು, ಶೇ. ೯೦ ರಷ್ಟು ಮಕ್ಕಳಿಗೆ ವಿತರಿಸಿಲಾಗಿದೆ.
ಜಿಲ್ಲೆಯ ಕಿರಿಯ ಪ್ರಾಥಮಿಕ-೨೮೨, ಹಿರಿಯ ಪ್ರಾಥಮಿಕ ೬೪೧, ಪ್ರೌಢಶಾಲೆ ೩೨೩ ಸೇರಿ ಒಟ್ಟು ೧೨೪೬ ಶಾಲೆಗಳಿಂದ ೧೬,೮೯,೫೭೬ ಪುಸ್ತಕಗಳಿಗೆ ಬೇಡಿಕೆ ಬಂದಿದ್ದು, ಇಲಾಖೆಯಿಂದ ೧೬,೮೯,೫೭೬ ಪಠ್ಯಪುಸ್ತಕ ಪೂರೈಕೆಕೂಡ ಆಗಿದ್ದು, ಅದರಲ್ಲಿ ಈಗಾಗಲೇ ೧೪,೦೦,೧೨೭ ಪುಸ್ತಕಗಳು ಮಕ್ಕಳ ಕೈ ಸೇರಿವೆ.
ಜಿಲ್ಲೆಯಲ್ಲಿ “ವಿದ್ಯಾಗಮ” “ವರ್ಕ್ ಫ್ರಂ ಹೋಂ” “ಬಿಸಿಯೂಟ ಪಡಿತರ ಹಂಚಿಕೆ” ಯಂತ ವಿಶೇಷ ಕಾರ್ಯಕ್ರಮಗಳು ಕ್ರಿಯಾಶೀಲವಾಗಿ ನಡೆಯುತ್ತಿವೆ.
ಇದೀಗ ಮಕ್ಕಳ ಸ್ವಯಂ ಕಲಿಕೆಯನ್ನು ಪ್ರೇರೇಪಿಸಲು ಪಠ್ಯ ಪುಸ್ತಕ, ಅಭ್ಯಾಸ ಪುಸ್ತಕಗಳನ್ನು ಮಕ್ಕಳ ಮನೆಗಳಿಗೆ ತಲುಪಿಸಲಾಗುತ್ತಿದೆ.
ನೆಮ್ಮದಿಯ ನಿಟ್ಟುಸಿರು:
ಮಕ್ಕಳು ಕಳೆದ ನಾಲ್ಕು ತಿಂಗಳಿನಿಂದ ಮನೆಯಲ್ಲಿಯೇ ಇದ್ದಾರೆ. ಇಷ್ಟೊಂದು ದೀರ್ಘ ಅವಧಿ ರಜೆಯಲ್ಲಿರುವುದು ಇದೇ ಮೊದಲು.
ಒಂದೆಡೆ ಶಾಲೆಗಳು ಆರಂಭವಾಗದೆ, ಪಠ್ಯ ಪುಸ್ತಕಗಳು ಇಲ್ಲದ ಕಾರಣ ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನೆಡೆಯಾಗಬಹುದು.
ಮಕ್ಕಳು ಕಲಿತಿರುವುದನ್ನು ಮರೆತು ಬಿಡಬಹುದು ಎಂಬ ಆತಂಕದಲ್ಲಿದ್ದರು. ಆದರೆ, ಇದೀಗ ಪಠ್ಯ ಕೈ ಸೇರಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳು ಆರಂಭ ಆಗದಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಕೂಡಲೇ ಶಾಲಾ ಹಂತಕ್ಕೆ ವಿತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿಲಾಗಿದೆ.
ಶೇ. ೯೦ ರಷ್ಟು ಪಠ್ಯಪಸ್ತಕ ಮಕ್ಕಳ ಕೈಸೇರಿವೆ. ಇನ್ನೂಳಿದ ಮಕ್ಕಳಿಗೆ ವಿತರಿಸಲು ಶಾಲಾ ಹಂತದಲ್ಲಿ ತರಗತಿವಾರು ವಿದ್ಯಾರ್ಥಿಗಳ ಪೋಷಕರನ್ನು ಸಣ್ಣ ಸಣ್ಣ ಗುಂಪುಗಳಲ್ಲಿ ಶಾಲೆಗೆ ಕರೆಸಿ, ಪುಸ್ತಕಗಳನ್ನು ವಿತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಎಸ್ಡಿಎಂಸಿ ಹಾಗೂ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ.” ಬಸವಲಿಂಗಪ್ಪ ಜಿ.ಎಂ., ಡಿ.ಡಿ.ಪಿ.ಐ ಗದಗ.