ಕೋವಿಡ್-೧೯ ನಿಂದ ಕಲಿಕೆಗೆ ಹಿನ್ನಡೆ
ಮುದ್ರಣಕಾಶಿಯಲ್ಲಿ ಕಲಿಕೆಗೆ “ವಿದ್ಯಾಗಮ” ಜಾರಿ
ಮಂಜುನಾಥ ಎಸ್.ರಾಠೋಡ
ಗದಗ prajakiran.com : ರಾಜ್ಯದಲ್ಲಿ ಕೋವಿಡ್ ಸೋಂಕು ಆತಂಕ ಸೃಷ್ಟಿಸಿರುವ ವೇಳೆ ಶಾಲೆಗಳು ಬಂದ್ ಆಗಿದ್ದರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯ ಬಾರದೆಂದು ಸರ್ಕಾರ ಜಾರಿಗೆ ತಂದಿರುವ “ವಿದ್ಯಾ ಗಮ’ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ.
ಮನೆ ಮುಂದಿನ ಜಗಲಿ, ಊರ ಮಧ್ಯದ ಅರಳೀಮರ, ದೇವಸ್ಥಾನದ ಆವರಣಗಳೇ ಈಗ ಹೊಸ ಶಾಲೆಗಳು. ಗ್ರಾಮೀಣ ಭಾಗದ ಮಕ್ಕಳಿಗೆ ಇಲ್ಲಿಯೇ ಇದೀಗ ಪಾಠ–ಪ್ರವಚನ ಆರಂಭಗೊಂಡಿದೆ.
ಜೂನ್ನಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಕೊರೊನಾ ಭೀತಿ ಕಾರಣ ಇನ್ನೂ ತೆರೆದಿಲ್ಲ. ಈ ನಡುವೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರದ ವಿದ್ಯಾಗಮ ಎಂಬ ಯೋಜನೆ ಆರಂಭಿಸಿದೆ.
ಇದಕ್ಕೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಕ್ಕಳು ಇರುವಲ್ಲಿಗೇ ತೆರಳಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ಏನಿದು ಯೋಜನೆ: ಕಳೆದ ಮೂರು ತಿಂಗಳಿಂದ ಶಾಲೆಗಳ ಬಾಗಿಲು ತೆರೆದಿಲ್ಲ. ಹೀಗಾಗಿ ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಶಿಕ್ಷಣ ಇಲಾಖೆಯು ‘ವಿದ್ಯಾಗಮ’ ಹೆಸರಿನ ಈ ಯೋಜನೆಯನ್ನು ಜಾರಿಗೆ ತಂದಿದೆ.
ಭೌತಿಕವಾಗಿ ಶಾಲೆಗಳು ಆರಂಭವಾಗುವವರೆಗೂ ಮಕ್ಕಳು ಇರುವಲ್ಲಿಗೇ ತೆರಳಿ ಅಲ್ಲಿಯೇ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಿದೆ.
ಜೊತೆಗೆ ಸರ್ಕಾರದ ಯೋಜನೆಗಳಾದ ಕ್ಷೀರಭಾಗ್ಯ, ಬಿಸಿಯೂಟ ಸಾಮಗ್ರಿಗಳೂ ಮಕ್ಕಳ ಪೋಷಕರಿಗೆ ವಿತರಣೆ ಆಗಲಿವೆ.
ಉದ್ದೇಶ:
ಪ್ರತಿ ಶಾಲಾ ವ್ಯಾಪ್ತಿಯಲ್ಲಿ 20-25 ಮಕ್ಕಳಿಗೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಲಾಗುವುದು. ವಿದ್ಯಾರ್ಥಿಗಳು ವಾಸವಿರುವ ಸ್ಥಳ ಆಧಾರಿಸಿ ಅಂತಹ ಮಕ್ಕಳನ್ನು ಒಗ್ಗೂಡಿಸಿ ಮಾರ್ಗದರ್ಶಿ ಶಿಕ್ಷಕರ ಮೂಲಕ ಕಲಿಕೆ ಪ್ರಾರಂಭಿಸಲಾಗುವುದು.
ಇಂತಹ ಶಿಕ್ಷಕರು ನೆರೆ ಹೊರೆ ಮಕ್ಕಳನ್ನು ಒಗ್ಗೂಡಿಸಿ ಚಿಕ್ಕ ತಂಡಗಳನ್ನು ರೂಪಿಸಿ ನೆರೆ ಹೊರೆ ಗುಂಪು ಎಂಬ ಹೆಸರಿನಲ್ಲಿ ಕಲಿಕೆ ಆರಂಭಿಸುವುದು “ವಿದ್ಯಾಗಮ’ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯೋಜನೆಯಲ್ಲಿ ಏನೇನಿದೆ?
೧) ಗ್ರಾಮದಲ್ಲಿನ 6ರಿಂದ 14 ವರ್ಷದ ಎಲ್ಲ ಮಕ್ಕಳಿಗೆ ಈ ತರಗತಿಗೆ ಪ್ರವೇಶ ನೀಡಲಾಗುತ್ತಿದೆ
೨) ಒಂದು ಗುಂಪಿನಲ್ಲಿ 20-25 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ. ಈ ವಿದ್ಯಾರ್ಥಿಗಳನ್ನು ಅವರ ತರಗತಿಗಳಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ.
೩) ನಿರ್ವಹಣೆಗೆ ಶಿಕ್ಷಣ ಇಲಾಖೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿದೆ. ಈ ಶಿಕ್ಷಕರು ಈ ಮಕ್ಕಳ ಸದ್ಯದ ಕಲಿಕೆ ಮೇಲೆ ನಿಗಾ ವಹಿಸಲಿದ್ದಾರೆ.
೪) ಶಿಕ್ಷಣ ಇಲಾಖೆಯು ಮಕ್ಕಳಿಗೆ ಈಗಾಗಲೇ ಪಠ್ಯಪುಸ್ತಕ ಪೂರೈಕೆ ಮಾಡಿದ್ದು, ಅದನ್ನು ಆಧರಿಸಿ ವಿದ್ಯಾರ್ಥಿಗಳು ಓದು ಮುಂದುವರಿಸಲಿದ್ದಾರೆ.
೫) ಈ ಪ್ರಕ್ರಿಯೆ ಮೇಲೆ ಶಾಲೆಯ ಎಸ್ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕಕು, ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗಾ ವಹಿಸಲಿದ್ದು, ಪ್ರಗತಿ ಬಗ್ಗೆ ಆಗಾಗ್ಗೆ ಮೇಲಧಿಕಾರಿಗಳಿಗೆ ವರದಿಯನ್ನೂ ನೀಡಲಿದ್ದಾರೆ.
“ಸರ್ಕಾರ ಒಳ್ಳೆಯ ಸಮಯದಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಲಿದೆ.”
– ಶರಣು ಗೋಗೇರಿ, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು .