ಜ್ಯೋತಿ ಸಂಜೀವಿನಿ ಜಾರಿಗೊಳಿಸಲು ಬದ್ಧ: ಬಸವರಾಜ ಗುರಿಕಾರ
ಗದಗ prajakiran. com : ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣಾ ಕಣ ರಂಗೇರಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿವೃತ್ತ ಶಿಕ್ಷಕ, ಸಂಘಟನಾ ಚತುರ ಬಸವರಾಜ ಗುರಿಕಾರ ಅವರ ಪರ ಶಿಕ್ಷಕರ ಒಲುವು ಕಂಡು ಬರುತ್ತಿದೆ.
ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಅವರಿಗೆ ಸೋಲಿನ ರುಚಿ ತೋರಿಸಲೇ ಬೇಕು ಎಂದು ಶಿಕ್ಷಕ ಮತದಾರರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಸವರಾಜ ಹೊರಟ್ಟಿ ವಿರುದ್ಧ ಬಹಿರಂಗ ಸಮರ ಸಾರುತ್ತಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಸೋಮವಾರ ಬಿರುಸಿನ ಪ್ರಚಾರ ನಡೆಸಿದರು.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರದೆಲ್ಲಡೆ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಶಿಕ್ಷಕರ ಸಾಕಷ್ಟು ಹೋರಾಟ, ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ಹಲವಾರು ವರ್ಷಗಳಿಂದ ಹೋರಾಟ ಮಾಡಿರುವ ಗುರಿಕಾರ ಅವರು, ವಿಧಾನ ಪರಿಷತ್ ಪ್ರವೇಶಿಸಿ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುವ ಕನಸು ಹೊತ್ತಿದ್ದಾರೆ.
ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿ, ಹೊರಟ್ಟಿ ಶಿಕ್ಷಕರ ಪ್ರತಿನಿಧಿಯಾಗಿ ಉಳಿದಿಲ್ಲ. ಸಂಪೂರ್ಣವಾಗಿ ರಾಜಕಾರಣಿ ಯಾಗಿ ಬದಲಾಗಿದ್ದಾರೆ.
ಹೀಗಾಗಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಸಮಯ ಅವರ ಬಳಿ ಇಲ್ಲದಂತಾಗಿದೆ. ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳು ಪರಿಹಾರವಾಗಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಮಿಂಚಿನ ಪ್ರಚಾರ ಮಾಡುತ್ತಿರುವ ಗುರಿಕಾರ ಅವರಿಗೆ ಶಿಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಈ ಬಾರಿ ಶತಾಯಗತಾಯ ಹೊರಟ್ಟಿ ವಿರುದ್ಧ ಗುರಿಕಾರ ಅವರನ್ನು ಗೆಲ್ಲಿಸಲೇಬೇಕು ಎಂದು ಕಾಂಗ್ರೆಸ್ ಮುಖಂಡರಿಗೂ ತಿಳಿಸಿದರು.
ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ, ಕಳೆದ ದಶಕಗಳಿಂದ ಜ್ಯೋತಿ ಸಂಜೀವಿನಿ ಯೋಜನೆ ಖಾಸಗಿ ಮತ್ತು ಅನುದಾನಿತ, ಅನುದಾನ ರಹಿತ ಶಾಲಾ ಶಿಕ್ಷಕರಿಗೆ ದೊರೆತಿಲ್ಲ.
ಈ ಯೋಜನೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದ್ದು, ಶಿಕ್ಷಕರಿಗೆ ಗಗನ ಕುಸುಮವಾಗಿದೆ. ಅದನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಐಟಿಐ ಕಾಲೇಜು ಸೇರಿದಂತೆ ಅನೇಕ ಕಾಲೇಜುಗಳಿಗೆ ಭೇಟಿ ನೀಡಿದ ಗುರಿಕಾರ ತಮಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜು ಕಲಾಲ, ಪುರಸಭಾ ಸದಸ್ಯ ಅಪ್ಪನಗೌಡ ನಾಯ್ಕರ, ಟಿ.ವಿ. ಶಿರಿಯಪ್ಪಗೌಡರ, ಪ್ರವೀಣ ಯಾವಗಲ್, ಎಚ್.ಬಿ. ಅಸೂಟಿ, ಎಂ.ಬಿ. ಅರಹುಣಸಿ, ದಿವಾನಸಾಬ ಕಿಲ್ಲೇದಾರ, ದೇವಪ್ಪ ಕಟ್ಟಿಮನಿ, ಪ್ರಕಾಶ ಹಡಗಲಿ, ವಿಷ್ಣು ಸಾಠೆ, ಶಂಕರ ಕಾಂಬಳೆ ಸೇರಿದಂತೆ ಇತರರು ಇದ್ದರು.