ಧಾರವಾಡ prajakiran.com: ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಕೈಬಿಟ್ಟು ಜನ ಸ್ನೇಹಿ ತೆರಿಗೆ ವ್ಯವಸ್ಥೆ ರೂಪಿಸಬೇಕು ಎಂದು ಕರ್ನಾಟಕ ಥಿಂಕರ್ಸ್ ಫೋರಮ್ ಸರಕಾರವನ್ನು ಆಗ್ರಹಿಸಿದೆ.
ಸರಕಾರ ೨೦೨೧-೨೨ರಿಂದ ಜಾರಿಗೊಳಿಸಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ತುಂಬಾ ಅಪಾಯಕಾರಿಯಾಗಿದೆ. ೨೦೦೫-೦೬ ರಿಂದ ಜಾರಿಯಲ್ಲಿದ್ದ ಪದ್ಧತಿಯೇ ಗೊಂದಲದ್ದಾಗಿತ್ತು.
ಸರಕಾರ ಅದನ್ನು ಸರಿಪಡಿಸದೆ ಮತ್ತೊಂದು ತೆರಿಗೆ ವ್ಯವಸ್ಥೆಗೆ ಮುಂದಾಗಿದ್ದು ಸರಿಯಲ್ಲ.
ಇದರಿಂದ ತೆರಿಗೆ ಪಾವತಿದಾರರಿಗಷ್ಟೇ ಅಲ್ಲ ಬಹುತೇಕ ಅಧಿಕಾರಿಗಳಿಗೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಇಂದಿಗೂ ಅರ್ಥವಾಗಿಲ್ಲ.
ಇದು ಜಾರಿಯಾದ ದಿನದಿಂದ ಮಹಾನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸಿರುವ ಬಹುತೇಕರು ತೆರಿಗೆ ನಿರ್ಧರಣೆಯನ್ನು ಖುದ್ದಾಗಿ ಮಾಡಿಲ್ಲ.
ಸ್ಥಳೀಯ ಸಂಸ್ಥೆಗಳೇ ತೆರಿಗೆ ಅರ್ಜಿ ಭರ್ತಿಗೆ ಬೇರೆ ಕೌಂಟರ್ ತೆರೆದಿವೆ.೩-೪ ವರ್ಷ ಹಿಂದೆ ತೆರಿಗೆ ಪಾವತಿಗಾಗಿ ಆನ್ಲೈನ್ ವ್ಯವಸ್ಥೆ ಜಾರಿಗೆ ಬಂದಿದ್ದರೂ ಅದರಲ್ಲೂ ತಪ್ಪುಗಳಿವೆ.
ಹಾಗಾದರೆ ಸ್ವಯಂ ಘೋಷಿತಕ್ಕೇನು ಅರ್ಥ ಎಂದು ಫೋರಂ ಪ್ರಶ್ನಿಸಿದೆ.
ವಾಸ್ತವತೆ ಹೀಗಿದ್ದರೂ ಹೊಸ ಪದ್ಧತಿ ಜಾರಿಗೆ ಸರಕಾರ ಕಳೆದ ಜನವರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದನ್ನು ವಿರೋಧಿಸಿದ್ದೆವು.
ನಂತರ ಇದು ಕಾಯ್ದೆಯಾಗುವ ಮುನ್ನ ಶಾಸನ ಸಭೆಗಳಲ್ಲಿ ಸಮಗ್ರ ಚರ್ಚೆಯಾಗಲಿಲ್ಲ. ಲೋಪದೋಷ ಸರಿಪಡಿಸುವ ಚಿಂತನೆಗಳಾಗಲಿಲ್ಲ. ಆರ್ಥಿಕ ತಜ್ಞರು, ಸಾರ್ವಜನಿಕರು, ಸಂಘ ಸಂಸ್ಥೆಗಳು, ವಾಣಿಜ್ಯೋದ್ಯಮ ಸಂಸ್ಥೆಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
೨೦೦೫-೦೬ ರ ಎಸ್.ಎ.ಎಸ್. ಪ್ರಕಾರ ಇಂದಿನವರೆಗೂ ೨೦೦೫-೦೬ರ ಮಾರ್ಗಸೂಚಿ ದರ ಆಧರಿಸಿ ತೆರಿಗೆ ಲೆಕ್ಕಾಚಾರ ಹಾಕಿ, ೩ ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಿಸಲಾಗುತ್ತಿತ್ತು.
ಇನ್ಮುಂದೆ ಚಾಲ್ತಿ ವರ್ಷದ ಮಾರ್ಗಸೂಚಿ ದರ ಆಧರಿಸಿ ಪ್ರತಿ ವರ್ಷವೂ ತೆರಿಗೆ ಹೆಚ್ಚಳವಾಗುತ್ತದೆ. ತೆರಿಗೆ ಲೆಕ್ಕಾಚಾರಕ್ಕೆ ವಿವಿಧ ಪ್ರದೇಶಗಳಿಗೆ ಬೇರೆ ಬೇರೆ ತೆರಿಗೆ ದರ ನಿಗದಿಯಾಗಲಿವೆ.
ಇದು ಗೊಂದಲ- ಅರಾಜಕತೆ ಸೃಷ್ಟಿಸಲಿದೆ. ಇದಕ್ಕೆ ಕೊನೆ ಹೇಳಲು ಸರಕಾರ ಎಚ್ಚೆತ್ತುಕೊಂಡು ಜನ ಸ್ನೇಹಿ ಆಸ್ತಿ ತೆರಿಗೆ ಪದ್ಧತಿಯನ್ನು ರೂಪಿಸಬೇಕೆಂದು ಪಾಂಡುರಂಗ ನೀರಲಕೇರಿ ಮತ್ತು ನಾಗರಾಜ ಹೊಂಗಲ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.