60 ದಿನಗಳ ಸರದಿ ಸತ್ಯಾಗ್ರಹ ನಾಳೆ ಮುಕ್ತಾಯ
ಧಾರವಾಡ prajakiran.com : ರೈತ ಹಿತರಕ್ಷಣಾ ಪರಿವಾರವತಿಯಿಂದ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಸರದಿ ಸತ್ಯಾಗ್ರಹ ನಾಳೆ ಮುಕ್ತಾಯವಾಗಲಿದ್ದು, ಈ ಸಂದರ್ಭದಲ್ಲಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ಸಂಯುಕ್ತ ರೈತ ಮೋರ್ಚಾದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ತಿಳಿಸಿದರು.
ಅವರು ಮಂಗಳವಾರ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರದ ರೈತರ ವಿರೋಧಿ ಕರಾಳ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಮೋರ್ಚಾ ದೆಹಲಿಯಲ್ಲಿ ನಡೆಸುತ್ತಿರುವ ಧರಣಿ ಬೆಂಬಲಿಸಿ ಸೆಪ್ಟಂಬರ್ ೩೦ ರಂದು ರೈತ ಹಿತರಕ್ಷಣಾ ಪರಿವಾರದವತಿಯಿಂದ ಹೋರಾಟ ಆರಂಭಿಸಲಾಯಿತು.
ಅಂದಿನಿಂದ ರೈತರು ಮತ್ತು ಜನರಲ್ಲಿ ಕೇಂದ್ರ ಸರಕಾರದ ಕಾಯ್ದೆಗಳ ಕುರಿತು ತಿಳುವಳಿಕೆ ಮೂಡಿಸುವುದು, ಸರಕಾರಕ್ಕೆ ಮನವಿ ಸಲಿಸುವುದು, ಟ್ರ್ಯಾಕ್ಟರ್ ರ್ಯಾಲಿ ಮುಂತಾದ ಹೋರಾಟಗಳನ್ನು ಹಂತ ಹಂತವಾಗಿ ಮಾಡುತ್ತ ಬರಲಾಗಿದೆ ಎಂದು ಹೇಳಿದರು.
ಈ ಸರದಿ ಧರಣಿ ನಾಳೆ ಮುಕ್ತಾಯವಾಗಲಿದ್ದು, ಮುಂಬರುವ ದಿನಗಳಲ್ಲಿ ಬೇರೆ ರೂಪದ ಹೋರಾಟಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ನಾಳೆ ಬೆಳಗ್ಗೆ ೯.೩೦ ಕ್ಕೆ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ ಸಿಂಗ್ ಟಿಕಾಯತ್, ಯದುವೀರ ಸಿಂಗ್, ದರ್ಶನ ಪಾಲ್, ಬಾಬಾಗೌಡ ಪಾಟೀಲ, ಮತ್ತಿತರ ನಾಯಕರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರು ರೈತರನ್ನುದ್ದೇಶಿಸಿ ಮಾತನಾಡುವರು.
ಆದ್ದರಿಂದ ರೈತ ಪರ ಚಿಂತಕರು, ರೈತ ಕಾರ್ಮಿಕರು, ರೈತ ಹೋರಾಟಗಾರರು, ದಲಿತರು, ಹಿಂದುಳಿದವರು, ಪ್ರಗತಿಪರ ಚಿಂತಕರು ಈ ಸಂದರ್ಭದಲ್ಲಿ ಉಪಸ್ಥಿತರಿರಬೇಕು.
ಜೊತೆಗೆ ಬೆಳಗಾವಿಯಲ್ಲಿ ನಾಳೆ ನಡೆಯುವ ಮಹಾ ರೈತ ಪಂಚಾಯತನಲ್ಲಿ ರೈತ ಬಾಂಧವರು ಭಾಗವಹಿಸಿಬೇಕು ಎಂದು ನೀರಲಕೇರಿ ಮನವಿ ಮಾಡಿದರು.
ಪೊಲೀಸರು ಯಾವುದೇ ರೀತಿಯ ಅಡೆ ತಡೆ ಮಾಡುವುದು ಪ್ರಕರಣ ದಾಖಲಿಸುವುದು ಮಾಡಬಾರದು ಎಂದು ಆಗ್ರಹಿಸಿದರು.
ಸಿದ್ದಣ್ಣ ಕಂಬಾರ,ಶ್ರೀಶೈಲಗೌಡ ಕಮತರ ಸುದ್ದಿಗೋಷ್ಠಿಯಲ್ಲಿದ್ದರು.