ಮಂಜುನಾಥ ಕವಳಿ
ಧಾರವಾಡ prajakiran.com : ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಗ್ರಾಮಗಳನ್ನು ಸಂರ್ಪಕಿಸುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿವೆ.
ಇದರಿಂದಾಗಿ ದಿನನಿತ್ಯ ನೂರಾರು ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವಂತಾಗಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಎಲ್ಲಿ ಅವು ತಮ್ಮ ಬಲಿ ತೆಗೆದುಕೊಳ್ಳುತ್ತವಯೋ ಎಂಬ ಭಯ ಆವರಿಸಿದೆ.
ಧಾರವಾಡದಿಂದ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆ ಹದಗೆಟ್ಟಿದ್ದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಳ್ಳಿಗಳ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು ಧಾರವಾಡ ಗ್ರಾಮೀಣ ಶಾಸಕರು ಆದಷ್ಟು ಬೇಗ ಈ ರಸ್ತೆಗಳ ಸುಧಾರಣೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹೀಗಾಗಿ ಧಾರವಾಡ ಗ್ರಾಮೀಣ ಶಾಸಕರು ಗ್ರಾಮೀಣ ಜನರ ಸಮಸ್ಯೆ ಕುರಿತು ಆದಷ್ಟು ಗಮನ ಹರಿಸಬೇಕು ಹಾಗೂ ಹದಗೆಟ್ಟಿರುವ ರಸ್ತೆ ಸುಧಾರಣೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.