ಧಾರವಾಡ Prajakiran.com : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜು.15 ರಿಂದ ತರಬೇತಿ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿರುವುದು ಸರಿಯಾದ ಬೆಳವಣಿಗೆಯಲ್ಲ.
ಒಂದೊಂದು ತರಬೇತಿ ಕೇಂದ್ರದಲ್ಲಿ 20 ಶಿಕ್ಷಕರು ಇರುತ್ತಾರೆ. ಜೊತೆಗೆ ಶಿಕ್ಷಕರೇ ಸಾನಿಟೈಸರ್ ಮತ್ತು ಊಟವನ್ನು ತರಬೇಕು ಎಂದು ಅಧಿಕಾರಿಗಳು ಸೂಚಿಸಿರುವುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
5 ದಿನ ನಲಿಕಲಿ, 5 ದಿನ ಜೀವನ ಕೌಶಲ್ಯ, 5 ದಿನ ವಿಷಯ ಆಧಾರಿತ ತರಬೇತಿ ನೀಡಲಿದ್ದು,ಒಬ್ಬ ಶಿಕ್ಷಕರಿಗೆ 10 ದಿನ ತರಬೇತಿ ನೀಡಿದರೆ ಪ್ರತಿದಿನ ಕೊಠಡಿಯನ್ನು ಸಾನಿಟೈಸರ್ ಮಾಡುತ್ತಾರೆಯೇ ? ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಡಯಟ್ ಪ್ರಾಂಶುಪಾಲರ ಬಳಿ ಕೇಳಿದಾಗ ರಾಜ್ಯದಿಂದ ಸುತ್ತೋಲೆ ಬಂದಿದೆ. ನಮ್ಮದೇನು ಅಭ್ಯಾಂತರವಿಲ್ಲ. ರಾಜ್ಯಮಟ್ಟದಲ್ಲಿ ರದ್ದಾದರೆ ತೊಂದರೆ ಇಲ್ಲ ಎಂದು ಹೇಳಿರುವುದು ಶಿಕ್ಷಕರಅಸಮಾಧಾನಕ್ಕೆ ಕಾರಣವಾಗಿದೆ.
ಕರೋನಾ ಹೆಚ್ಚುರುವುದರಿಂದ ಎಲ್ಲಾ ಶಿಕ್ಷಕರು ಒಂದೆಡೆ ಸೇರುವುದು ಸರಿಯಲ್ಲ. ದಯಮಾಡಿ ತರಬೇತಿಯನ್ನು ಮುಂದೂಡಬೇಕು ಎಂದು ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.
ಇಂದಿನ ದಿನಗಳಲ್ಲಿ ಕರೋನಾದ ರಣಕೇಕೆ ಹೆಚ್ಚಾಗಿದ್ದು ಶಿಕ್ಷಕರೆಲ್ಲರೂ ಆತಂಕ ಭಯದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಫೇಸ್ ಟು ಫೇಸ್ ತರಬೇತಿಯನ್ನು ಸಾಮಾಜಿಕ ಅಂತರದೊಂದಿಗೆ ನಡೆಸಲು ಆದೇಶ ಮಾಡಿರುವದು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವಿಭಾಗ ಮಟ್ಟದಲ್ಲಿ ಆನಲೈನ್ ಮೂಲಕ ತರಬೇತಿಯು ನಡೆಸುವುದು ಒಳ್ಳೆಯದು. ಕೋವಿಡ್ ಮಾರ್ಗಸೂಚಿ ಅನ್ವಯ ಗುಂಪು ಸೇರುವಿಕೆ, ಸಭೆ ಸಮಾರಂಭಗಳನ್ನು ಆಯೋಜಿಸಲು ನಿರ್ಬಂಧವಿರುವುದರಿಂದ ಈಗ ತರಬೇತಿಗಳನ್ನು ಆಯೋಜಿಸಿದರೆ ಯಾವ ರೀತಿಯ ಸುರಕ್ಷೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತರಬೇತಿ ಅಂದ ಮೇಲೆ ಅನೇಕ ಚಟುವಟಿಕೆಗಳು ಇರುತ್ತವೆ. ಅಲ್ಲದೇ ಶಾಲಾರಂಭದ ದಿನಾಂಕ, ಪಠ್ಯವಸ್ತುವಿನ ಕಡಿತದ ಬಗ್ಗೆ ಈವರೆಗೆ ಸ್ಪಷ್ಟತೆಯಿಲ್ಲ. ಹೀಗಾಗಿ ಈಗ ತರಬೇತಿ ಅವಶ್ಯವೇ? ತರಬೇತಿ ಇಲ್ಲದೇ ಶಿಕ್ಷಕರಿಗೆ ಸಾಧ್ಯವಿಲ್ಲವೇ? ಎಂದಿದ್ದಾರೆ.
ಕರೋನಾ ತೀವ್ರತೆ ಕಡಿಮೆಯಾಗುವವರೆಗೂ ತರಬೇತಿಗಳನ್ನು ಮುಂದೂಡಲು ಮತ್ತು ಸೀಲ್ ಡೌನ್ ಮತ್ತು ಕ್ವಾರಂಟೈನ್ ನಲ್ಲಿರುವ ಶಿಕ್ಷಕರಿಗೆ ವಿನಾಯತಿ ರಜೆಯನ್ನು ಮಂಜೂರಿಸುವ ಆದೇಶ ಮಾಡಿ ಶಿಕ್ಷಕರಿಗೆ ಅನುಕೂಲ ಮಾಡಬೇಕು ಎಂದು ಕರ್ನಾಟಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಮಹಾ ಪೋಷಕರಾದ ಪವಾಡೆಪ್ಪ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ ಮನವಿ ಮಾಡಿದ್ದಾರೆ.