ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಆಯುಕ್ತ ಸೇರಿ 6 ಪೊಲೀಸರ ವಿಚಾರಣೆ ನಡೆದಿದೆ
ಅಂದಿನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಜಿನೇಂದ್ರ ಖಣಗಾವಿ, ಧಾರವಾಡ ಎಸಿಪಿ ವಾಸುದೇವ ನಾಯ್ಕ, ಅಂದಿನ ಉಪನಗರ ಪೊಲೀಸ್ ಇನ್ಸಪೆಕ್ಟರ್ ಗಳಾದ ಚನ್ನಕೇಶವ ಟಿಂಗರಿಕರ್ ಹಾಗೂ ಮೋತಿಲಾಲ್ ಪವಾರ್ ಸೇರಿ ಹಲವು ಪೊಲೀಸರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳ ತಂಡ ನಡೆಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಿಚಾರಣೆ ನಡೆಸಿ, ಮಹತ್ವದ ಮಾಹಿತಿ ಸಂಗ್ರಹಿಸಿದರು ಎಂದು ಗೊತ್ತಾಗಿದೆ.
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ ಜಿಮ್ ನಲ್ಲಿ ಬೆಳ್ಳಂ ಬೆಳಗ್ಗೆ ಯೋಗೀಶಗೌಡ ಗೌಡರನ್ನು ಖಾರದ ಪುಡಿ ಎರಚಿ, ಮಚ್ಚು, ಲಾಂಗ್ ಸೇರಿ ಹಲವು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.
ಅಂದು ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸಿದ ಆರು ಆರೋಪಿಗಳಿಗೂ ಸಿಬಿಐ ಬಂಧಿಸಿದ 8 ಆರೋಪಿಗಳಿಗೂ ಸ್ವಾಮ್ಯತೆ ಆಗಿರಲಿಲ್ಲ.
ಹೀಗಾಗಿ ಅವರನ್ನುಯಾರು, ಎಲ್ಲಿ ಬಂಧಿಸಿದರು. ಯಾವ ಆಧಾರದ ಮೇಲೆ ಬಂಧಿಸಲಾಯಿತು. ಇದರ ಹಿಂದೆ ಯಾರಾದರೂ ಪ್ರಭಾವಿಗಳ ಒತ್ತಡವಿತ್ತೆ. ಪೊಲೀಸ್ ತನಿಖೆ ದಾರಿ ತಪ್ಪಿದ್ದು ಏಕೆ ಎಂಬುದರ ಕುರಿತು ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.
ಅಂದಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ ಆಯುಕ್ತರಿಂದ ಹಿಡಿದು ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ವರೆಗೆ ಎಲ್ಲರನ್ನೂ ಈ ಹಿಂದೆ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು.
ಇದೀಗ ಎಲ್ಲರನ್ನ ಎಕಕಾಲಕ್ಕೆ ಬೆಂಗಳೂರು ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸಿರುವುದು ಪ್ರಕರಣದ ತನಿಖೆ ಚುರುಕುಗೊಂಡಿರುವುದನ್ನ ತೋರಿಸುತ್ತದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಹೇಳಿಕೆ ಆಧಾರದ ಮೇಲೆ ಸಿಬಿಐ ಅಧಿಕಾರಿಗಳ ತಂಡ ಮತ್ತೇ ಮುಂದಿನ ದಿನಗಳಲ್ಲಿ ಇನ್ನು ಯಾರೆನ್ನ ವಿಚಾರಣೆಗೆ ಒಳಪಡಿಸುತ್ತದೆ ಎಂಬುದು ಕಾದು ನೋಡಬೇಕಿದೆ.