ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಧಾರವಾಡ prajakiran.com : ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ನಾಳೆ (ಮಾರ್ಚ್ 26) ಮಧ್ಯಾಹ್ನ ನವಲಗುಂದ ತಾಲೂಕಿನ ಹೆಬ್ಬಾಳ ಮತ್ತು ಬಳ್ಳೂರು ಗ್ರಾಮಗಳಿಗೆ ಸೀಮಿತವಾಗಿ ಈ ಗ್ರಾಮಗಳಲ್ಲಿ ಪಿಂಚಣಿ, ಕಂದಾಯ ಅದಾಲತ್ ಮತ್ತು ಜನಸಂಪರ್ಕ ಸಭೆಗಳನ್ನು ಆಯೋಜಿಸಿದ್ದಾರೆ.
ಮಾ.26 ರಂದು ಮಧ್ಯಾಹ್ನ 3 ಗಂಟೆಗೆ ಹೆಬ್ಬಾಳ ಗ್ರಾಮಕ್ಕೆ ಆಗಮಿಸುವ ಜಿಲ್ಲಾಧಿಕಾರಿಗಳು ಗ್ರಾಮದ ಸಿದ್ಧಾರೂಢ ಮಠದಲ್ಲಿ ಪಿಂಚಣಿ, ಕಂದಾಯ ಅದಾಲತ್ ಮತ್ತು ಜನಸಂಪರ್ಕ ಸಭೆ ಜರುಗಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಇತ್ಯರ್ಥಗೊಳಿಸಲಿದ್ದಾರೆ.
ನಂತರ ಅವರು ಸಂಜೆ 4 ಗಂಟೆಗೆ ಬಳ್ಳೂರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಸಿದ್ಧಾರೂಢ ದೇವಸ್ಥಾನದಲ್ಲಿ ಅದಾಲತ್ ಜರುಗಿಸಿ ಗ್ರಾಮಸ್ಥರಿಂದ ಕುಂದು ಕೊರತೆಗಳನ್ನು ಸ್ವೀಕರಿಸಲಿದ್ದಾರೆ.
ಜಿಲ್ಲಾಧಿಕಾರಿಗಳ ಈ ಕಾರ್ಯಕ್ರಮದ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ ಬಿ., ತಹಶೀಲ್ದಾರ ನವೀನ ಹುಲ್ಲೂರ, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಎ.ಪಿ., ನವಲಗುಂದ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ಕಂದಾಯ ನಿರೀಕ್ಷಕ, ಪಿಡಿಓ, ಗ್ರಾಮಲೆಕ್ಕಾಧಿಕಾರಿ ಭಾಗವಹಿಸಲಿದ್ದಾರೆ.
ಆದ್ದರಿಂದ ಹೆಬ್ಬಾಳ ಮತ್ತು ಬಳ್ಳೂರು ಗ್ರಾಮಗಳಿಗೆ ಸೀಮಿತವಾಗಿ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.