ಜನ ಜಾಗೃತಿ ಸಂಘದ ಸಹಯೋಗದಲ್ಲಿ ವಿಶಿಷ್ಟ ಪ್ರಯತ್ನ
ಕಲಾವಿದ ಮಂಜುನಾಥ ಹಿರೇಮಠ ಕೈ ಚಳಕ
ಭಕ್ತಿ ಭಾವದಿಂದ ಪೂಜೆ,ಪುನಸ್ಕಾರ ಸಲ್ಲಿಸಿದ ಜನತೆ
ಧಾರವಾಡ prajakiran.com : ನೂರಾರು ವರ್ಷಗಳ ಹೋರಾಟ, ಸಾವಿರಾರು ಕರಸೇವಕರ ತ್ಯಾಗ ಬಲಿದಾನದ ಪರಿಣಾಮವಾಗಿ ಆ. 5ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯುತ್ತಿರುವುದು ಸಮಸ್ತ ಭಾರತೀಯರಿಗೆ ಸಂತಸ ತಂದಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಹೇಳಿದರು.
ಅವರು ಮಂಗಳವಾರ ದೊಡ್ಡನಾಯನಕ ಕೊಪ್ಪ ಬಡಾವಣೆಯ ಬಸ್ ನಿಲ್ದಾಣದ ಬಳಿಯಲ್ಲಿ ಜನ ಜಾಗೃತಿ ಸಂಘದ ಸಹಯೋಗದಲ್ಲಿ ಮರಳಿನಲ್ಲಿ ರಾಮಮಂದಿರ ಕಲಾಕೃತಿಗೆ ಪೂಜೆ ಸಲ್ಲಿಸಿದ ಬಳಿಕ ನೆರೆದ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದರು.
ರಾಮಮಂದಿರ ಶಿಲಾನ್ಯಾಸ ಹಿನ್ನಲೆಯಲ್ಲಿ ಜನಜಾಗೃತಿ ಸಂಘದ ವತಿಯಿಂದ ಇಂತಹ ವಿಶಿಷ್ಟ ಪ್ರಯತ್ನ ಮಾಡಲಾಗಿದ್ದು, ಕಲಾವಿದ ಮಂಜುನಾಥ ಹಿರೇಮಠ ಅವರ ಕೈ ಚಳಕದಲಿ ಕಲಾಕೃತಿ ಅರಳಿರುವುದು ಧನ್ಯತಾ ಭಾವ ಮೂಡಿಸಿದೆ ಎಂದರು.
ಸ್ಥಳೀಯ ಜನತೆ ಭಕ್ತಿ ಭಾವದಿಂದ ಪೂಜೆ,ಪುನಸ್ಕಾರ ಸಲ್ಲಿಸಿ ಕೇಸರಿ ಧ್ವಜ ಹಿಡಿದು, ರಾಮನಾಮ ಜಪಿಸಿ, ಘೋಷಣೆ ಮೊಳಗಿಸಿ ಸಂಭ್ರಮಿಸಿದರು. ಅಲ್ಲದೆ, ರಾಮಮಂದಿರವನ್ನು ಮರಳಿನಲ್ಲಿಯೇ ನೋಡಿ ಕಣ್ಣುತುಂಬಿಸಿಕೊಂಡು ಧನ್ಯತಾ ಭಾವ ಮರೆದು ಸಂತಸ ಪಟ್ಟರು.
ಸುಮಾರು 20 ಟನ್ ಮರಳಿನ ದಿಬ್ಬದಲ್ಲಿ ಆರು ಅಡಿ ಎತ್ತರ ಹಾಗೂ 10 ಅಡಿ ಅಗಲದಲ್ಲಿ ಮಂದಿರದ ಪ್ರತಿಕೃತಿಯನ್ನು ಮಂಜುನಾಥ ಹಿರೇಮಠ ರಚಿಸಿದ್ದಾರೆ.
ಬೆಳಗ್ಗೆ 5.30ಗಂಟೆಗೆ ಆರಂಭವಾದ ಅವರ ಕಲಾಕೃತಿ ರಚನೆ ಬೆಳಗ್ಗೆ 10ಗಂಟೆಯವರೆಗೆ ನಿರಂತರವಾಗಿ ಐದು ಗಂಟೆಗಳಲ್ಲಿ ಅವಧಿಯಲ್ಲಿ ಯಶಸ್ವಿಯಾಗಿದೆ.
ಕಲಾವಿದ ಮಂಜುನಾಥ ಹಿರೇಮಠ ಮಾತನಾಡಿ, ಅಯೋಧ್ಯೆಗೆ ಹೋಗಿ ಸೇವೆ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಲ್ಲಿಯೇ ಮರಳಿನಲ್ಲಿಕಲಾಕೃತಿ ರಚಿಸಿ ನಮನ ಸಲ್ಲಿಸಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸುಮಂಗಲಾ ಬಸವರಾಜ ಕೊರವರ, ಈರಣ್ಣ ಅಗಳಗಟ್ಟಿ, ಆನಂದ ಪಾಟೀಲ, ಪ್ರವೀಣ ಕಾಳಗಿ, ಆತ್ಮಾನಂದ ಹಡಪದ, ಸುಶೀಲಾ ಕಾಂಬಳೆ ಸೇರಿದಂತೆ ಬಡಾವಣೆಯ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.