ಧಾರವಾಡ prajakiran.com : ತಮ್ಮ 6 ತಿಂಗಳ ವೇತನ ನೀಡದೆ ಇರುವುದರಿಂದ ಪುಟ್ಟ ಮಗುವಿನೊಂದಿಗೆ ಕುಟುಂಬ ಸಮೇತ ಪಿಡಿಒ ಒಬ್ಬರು ಪ್ರತಿಭಟನೆ ನಡೆಸಿದ ಘಟನೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಪಶುಪತಿಹಾಳದ ಗ್ರಾಮಲೆಕ್ಕಾಧಿಕಾರಿ ವಿನೋದಾ ಸಾತಕೋಡಿಅವರು ತಮ್ಮ ಕುಟುಂಬ ನಿರ್ವಹಣೆಗೆ ಗಾಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಭಿಕ್ಷೆ ಬೇಡುವ ಮೂಲಕ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು
ಅವರು ಗುರುವಾರ ಮುಂಜಾನೆ ಮಳೆ,ಗಾಳಿ ಎನ್ನದೇ ಪುಟ್ಟ ಮಗುವಿನೊಂದಿಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮಲೆಕ್ಕಾಧಿಕಾರಿಯಾಗಿದ್ದಾರೆ.
ಆರು ತಿಂಗಳಿನಿಂದ ಹೆರಿಗೆಗೆ ತೆರಳಿದ ನಂತರ ಕೆಲಸಕ್ಕೆ ಹಾಜರಾದ ಮೇಲೆ ವೇತನ ನೀಡದಿರುವುದರಿಂದ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ವೇತನ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ಅಲ್ಲದೆ ಅನೇಕ ಕಾರಣ ಹೇಳಿ ಸಂಬಳ ನೀಡಲು ಸತಾಯಿಸುತ್ತಾರೆ ಎಂದು ಗೋಳು ತೋಡಿಕೊಂಡರು. ತಹಶೀಲ್ದಾರ ಬಸವರಾಜ ಮೆಳವಂಕಿ ಹಾಗೂ ಇ.ಎಸ್.ಟಿ ಉದಯಕುಮಾರ ಸಂಬಳ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ನೇರ ಆರೋಪ ಮಾಡಿದರು.
ಕಚೇರಿಗೆ ಆಗಮಿಸಿದಾಗ ತಹಸೀಲ್ದಾರ್ ಅವರು ಇಲ್ಲದೇ ಇರುವುದರಿಂದ ಕಚೇರಿ ಆವರಣದ ಧ್ವಜ ಕಂಬದ ಮುಂದೆ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ಮಾಡುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಪರದಾಡುತ್ತಿರುವುದು ಕಂಡುಬಂದಿತು.
ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸ್ ಸಿಬ್ಬಂದಿ ಆಗಮಿಸಿ ಮಹಿಳೆಯನ್ನು ಕುಟುಂಬದವರನ್ನು ಸಮಾಧಾನಪಡಿಸಿ ಕಳುಹಿಸಿದರು.
ಆರು ತಿಂಗಳಿನಿಂದ ಕುಟುಂಬ ನಿರ್ವಹಣೆ ಬಹಳ ಕಷ್ಟವಾಗಿದೆ. ತಹಸೀಲ್ದಾರ ಬಸವರಾಜ ಮೆಳವಂಕಿ ಹಾಗೂ ಇ.ಎಸ್.ಟಿ ಉದಯಕುಮಾರ ಅವರು ವೈಯಕ್ತಿಕ ಕಾರಣಕ್ಕೆ ನನಗೆ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದರು.