ಧಾರವಾಡ prajakiran.com : ರಾಜ್ಯಾದ್ಯಂತ ಬಹು ಚರ್ಚಿತ ವಿಷಯವಾಗಿರುವ ಆನ್ ಲೈನ್ ಶಿಕ್ಷಣ ಯಾವುದೇ ಕಾರಣಕ್ಕೂ ಪ್ರಾಥಮಿಕ, ಪ್ರೌಢ ಶಾಲೆಯ ಮಕ್ಕಳಿಗೆ ಬೇಡವೇ ಬೇಡ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದ್ದಾರೆ.
ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಆನ್ ಲೈನ್ ಶಿಕ್ಷಣಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಇದರಿಂದ ಮಕ್ಕಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಪೋಷಕರೇ ಮಕ್ಕಳಿಗೆ ಮೋಬೈಲ್ ನೀಡಿ ದಾರಿ ತಪ್ಪಿಸಿದಂತಾಗುತ್ತದೆ. ಅದರಿಂದ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದರು.
ಜಿಲ್ಲಾಮಟ್ಟದಲ್ಲಿಯೇ ಆನ್ ಲೈನ್ ಶಿಕ್ಷಣ ಯಶಸ್ವಿಯಾಗಲ್ಲ.ಅಂತಹದರಲ್ಲಿ ಗ್ರಾಮೀಣ ಮಕ್ಕಳಿಗೆ ಅದು ಸಾಧುವಲ್ಲ. ಹೀಗಾಗಿ ರಾಜ್ಯ ಸರಕಾರ ಅದಕ್ಕೆ ಕಡಿವಾಣ ಹಾಕಬೇಕು ಎಂದರು.
ಇದೇ ವೇಳೆ ಶಾಲೆಗಳ ಆರಂಭ ದಿನಾಂಕ ನಿಗದಿಯಾಗುವರೆಗೆ ಶಿಕ್ಷಕರಿಗೆ ಯಾವುದೇ ಒತ್ತಡ ಹಾಕಬೇಡಿ. ಅವರಿಗೆ ಕೆಲಸಕ್ಕೆ ನಿಯೋಜಿಸಲೇ ಬೇಕಾದರೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿ ಎಂದು ಸಲಹೆ ನೀಡಿದರು.
ದಾಖಲಾತಿ ಆಂದೋಲನ ಸಮುದಾಯದ ಸಹಭಾಗಿತ್ವದಲ್ಲಿ ನಡೆಯುವುದರಿಂದಅದು ಕೂಡ ಫಲಪ್ರದವಾಗಲ್ಲ.
ಕರೋನಾ ಸಂಪೂರ್ಣ ಮುಕ್ತವಾದ ನಂತರ ದಾಖಲಾತಿ ಆಂದೋಲನ ಮಾಡಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.
ಇದೇ ವೇಳೆ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ (೫ ರಿಂದ ೭ನೇ ವರ್ಗ) ಕರೋನಾ ಗೆಲ್ಲೋಣ ಚಿತ್ರಕಲಾ ಸ್ಪರ್ಧೆಯನ್ನು, ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕರೋನಾ ನಂತರದ ಜೀವನ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯ ವಿಜೇತರ ಹೆಸರನ್ನು ಪ್ರಕಟಿಸಿದರು.
ಬೆಳಗಾವಿ ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆ -೧೧೭, ಗದಗ -೦೯, ಹಾವೇರಿ -೧೬, ಕಾರವಾರ – ೧೭, ಬಾಗಲಕೋಟ -೧೫, ವಿಜಯಪೂರ -೧೦, ಚಿಕ್ಕೋಡಿ-೮, ಶಿರ್ಶಿ-೬, ಬೆಳಗಾವಿ -೪೫, ಒಟ್ಟು ೨೩೬ ವಿದ್ಯಾಥಿಗಳು ಭಾಗವಹಿಸಿದ್ದರು.
ಅದೇ ರೀತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕರೋನಾ ನಂತರದ ಜೀವನ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆ -೬೪, ಗದಗ -೧೯, ಹಾವೇರಿ -೧೮, ಕಾರವಾರ – ೩೨, ಬಾಗಲಕೋಟ -೨೧, ವಿಜಯಪೂರ -೧೪, ಚಿಕ್ಕೋಡಿ-೮, ಶಿರ್ಶಿ -೧೩, ಬೆಳಗಾವಿ-೪೫, ಕನ್ನಡ ಮಾಧ್ಯಮದಲ್ಲಿ ಒಟ್ಟು ೨೩೪ ವಿದ್ಯಾಥಿಗಳು ಭಾಗವಹಿಸಿದ್ದರು. ಆಂಗ್ಲ ಮಾಧ್ಯಮದಲ್ಲಿ ಒಟ್ಟು ೩೦ ವಿದ್ಯಾಥಿಗಳು ಭಾಗವಹಿಸಿದ್ದರು.
ಉರ್ದು ಮಾಧ್ಯಮದಲ್ಲಿ ಒಟ್ಟು ೦೫ ವಿದ್ಯಾಥಿಗಳು ಭಾಗವಹಿಸಿದ್ದರು. ಅವರಿಗೆಲ್ಲರೂ ಪ್ರಮಾಣ ಪತ್ರ ಹಾಗೂ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದರು.