ಧಾರವಾಡ prajakiran.com : ಗೊಂದಲದ ಗೂಡಾಗಿರುವ ಬಿ ಎಡ್ ಪರೀಕ್ಷೆಗಳನ್ನು ಕೊನೆಗೂ ಕರ್ನಾಟಕ ವಿಶ್ವವಿದ್ಯಾಲಯ ಮುಂದೂಡಿದೆ ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ರವೀಂದ್ರನಾಥ ಕದಂ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಈ ಕುರಿತು ಪ್ರಜಾಕಿರಣ.ಕಾಮ್ ದೊಂದಿಗೆ ಮಾತನಾಡಿದ ಅವರು, ಸೆ. 11ರಿಂದ 19ರವರೆಗೆ ನಡೆಯಬೇಕಿದ್ದ ಬಿ ಎಡ್ ಪರೀಕ್ಷೆ ಸದ್ಯಕ್ಕೆ ಮುಂದೂಡಲಾಗಿದೆ.ಸೆ. 21ರ ನಂತರ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ ಎಂದರು.
ಬಿ ಎಡ್ ಪೂರಕ ಪರೀಕ್ಷೆಗಳ ಜೊತೆಗೆ ಈ ಬಾರಿ ಹೊಸ ಪರೀಕ್ಷೆ ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲರೂ ಪರೀಕ್ಷೆ ಬರೆಯಬೇಕೆ. ಅಥವಾ ಬೇರೆ ವಿಶ್ವವಿದ್ಯಾಲಯದ ಮಾದರಿಯಲ್ಲಿ ಪರೀಕ್ಷೆ ಬರೆಯುವವರೂ ಬರೆಯಲಿ. ಬರೆಯದಿರುವವರಿಗೆ ಮಾತ್ರ ಪ್ರಮೋಟ್ ಮಾಡಬೇಕೆ, ಅಥವಾ ಎಲ್ಲರಿಗೂ ಸಾಮೂಹಿಕವಾಗಿ ಪ್ರಮೋಟ್ ಮಾಡಬೇಕೆ ಎಂಬುದರ ಕುರಿತು ಕೂಡ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.
ಈ ಬಗ್ಗೆ ಸೆ. 9ರಂದು ನಡೆಯುವ ಡೀನ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಧಿಕೃತ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಅಲ್ಲಿಯವರೆಗೆ ಪರೀಕ್ಷೆಯಂತೂ ಸದ್ಯಕ್ಕೆ ಮುಂದೂಡಲಾಗಿದೆ ಎಂದು ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.
ಸೆ. 5ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂದಿಸಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಶ್ವನಾಥ ಎಂ ಅವರು ಬಿ ಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಬಡ್ತಿ ನೀಡುವುದಾಗಿ ಮೌಖಿಕ ಭರವಸೆ ನೀಡಿದ್ದರು.
ಆದರೆ ಸೆ. 7ರ ಸೋಮವಾರ ಸಂಜೆವರೆಗೂ ಈ ಕುರಿತು ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಹೀಗಾಗಿ ಕರ್ನಾಟಕ ವಿಶ್ವವಿದ್ಯಾಲಯವ್ಯಾಪ್ತಿಯ ನಾಲ್ಕು ಜಿಲ್ಲೆಗಳಾದ ಗದಗ, ಧಾರವಾಡ,ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ನೂರಾರು ಕಾಲೇಜುಗಳ ಆರು ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಟ್ಟಾರೆ ಕರ್ನಾಟಕ ವಿಶ್ವವಿದ್ಯಾಲಯದ ಬಿ ಎಡ್ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆದೇಶಕ್ಕೆ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿರುವುದು ಸುಳ್ಳಲ್ಲ.